Monday, 5 May 2014

ವಿರಹ ಕವನ ... !!!

ಮನಕೆ
ತಗುಲಿದ ಗಾಯಕೆ
ಅಕ್ಷರಗಳಲಿ
ಸಾಂತ್ವನ
ಹೇಳತೊಡಗಿದೊಡೆ ....
ಅಳುವ ಮನವು
ನಗುತ
ಜನ್ಮ ನೀಡುವ
ಕೂಸು ....
ವಿರಹ ಕವನ ... !!!

ನನ್ನ ಅನುಭವ

ಮುಂದಿನ ವಾರದಿ
ನಡೆವ
ಮೊಮ್ಮಗಳ ಮದುವೆಗೆ
ಸಾಗರವ ದಾಟಿ
ಬರುವನೆನ್ನ
ಕಂದನೆಂದು
ಕಾಯುತಿದ್ದಳೆನ್ನಮ್ಮ
ಕಣ್ಣಿಗೆ ಕಣ್ಣಿಟ್ಟು ...
ತನ್ನ ಕಂದನ ಮೊಗವ
ನೋಡಲಿರುವ
ದಿನಕಿಂತ ಒಂದೆರಡು
ದಿನ ಮೊದಲೇ
ಕರೆದನವನು ...
ತನ್ನೆಡೆಗೆ
ಎನ್ನೊಡೆಯ ...
ಮೈಲುಗಳು
ಹಾರಿ ತನ್ನಮ್ಮನ
ಕಾಣ ಬಂದಾಗ
ಮಲಗಿದ್ದಳೆನ್ನಮ್ಮ ....
ತನ್ನೆರಡು
ಕಣ್ಣುಗಳ ಮುಚ್ಚಿ ....

(ನನ್ನ ಅನುಭವ)

ನಿನ್ನ ಮೊಗವರಿಕೆ ...

ನಿನ್ನ
ನೆನಪೆನ್ನ
ನೆತ್ತಿಯಲಿ
ತೂಗುತಿಹ
ರತ್ನ ಸೂಲು ..
ನಗುವದನದ
ಅನುಪಸ್ತಿತಿಯಲಿ
ಅನುದಿನವು
ಅನುಭವಿಸುವೆ
ನಿನ್ನ
ಮೊಗವರಿಕೆ ... !!!
(ಸೂಲು=ನೆತ್ತಿಯ ಆಭರಣ
ಮೊಗವರಿಕೆ = ಸ್ನೇಹ )

ಸಂಜೆಯ ಕುಳಿರ್ಗಾಳಿಯ ತಂಪು ..

ಸಂಜೆಯ 
ಸೊಬಗ ಸವಿಯಲು 
ನೀರ್ದಾಣ ದಡದಲಿ 
ಕುಳಿತು - 
ಜಲ ಚರಗಳ... 
ಬಕ - ಮರಾಲಗಳ
ಅಲೆದಾಟ
ನಲಿದಾಟ ..
ನೋಡಿ ನಗುತಿರಲು
ನಿನ್ನ ನೆನುಪುಗಳು
ಚಾಮರವಾಗಿ ಬೀಸಿ
ಕುಳಿರ್ಗಾಳಿಯ
ತಂಪು ನೀಡುತ್ತಿತ್ತು ... !!!

ನೀಲಮಣಿ ಬಹುಮಾನ ...



ಗೆಳತೀ ...
ನಿನ್ನ
ನೀಲ ಕಣ್ಣೊಳು
ನನ್ನೆಡೆಗೆ
ಮಿಟಕರಿಸಿ 
ನೋಡುವ
ನೋಟವೊಂದೇ
ಸಾಕೆನಗೆ
ನಾನೆನುವೆ
ಅದೇ ನೀ ಕೊಡುವ
ನೀಲಮಣಿ
ಬಹುಮಾನ ... 
(ನೀಲಮಣಿ =ನೀಲಿ ಬಣ್ಣದ ರತ್ನ )

ಅವಾಂತರ ..

ಅವಳ
ಪುಸ್ತಕದ ಪುಟಗಳೆಡೆಯಲ್ಲಿ
ದೊರೆತ
ನಾ ಬರೆದ ಹಳೆಯ
ಪ್ರೇಮ ಪತ್ರವನೋದಿದಾಗಲೇ 
ತಿಳಿದುದ್ದು
ನಾ ಬರೆದ ಅವಾಂತರ ...
ತೊಂಡೆ ಬೆಂಡೆ
ಬಾಳೆ ದಾಳಿಂಬೆ
ಜಿಂಕೆ ಕಣ್ಣು ...
ಅನುಪಮ ವರ್ಣನೆ . ...
ಇಂದಿನ ಸೌನ್ದರ್ಯ
ಅಂದಿನ ಉಪಮೆ ...
ಅಜಗಜಾಂತರ ... !!!

ಪಾಪಿಯ ದೇಹವ ಅಗ್ನಿಯೂ ಸ್ಪರ್ಶಿಸಲಿಲ್ಲ ... !!!!

ಬಡಜನರ
ಸೂರಿಗೆ ಕೊಳ್ಳಿಯಿಟ್ಟ
ಮತೀಯ ಗಲಭೆಗೆ
ನೇತ್ರತ್ವ ಕೊಟ್ಟ
ಊರ ಜನರ ಶಾಪಕ್ಕೆ 
ಬಲಿಯಾಗಿದ್ದ
ಪಾಪಿ ...
ಕೊನೆಗೊಮ್ಮೆ
ತಾನೂ ಸತ್ತ
ಜೇಬಿನಲೊಂದು
ಚೀಟಿಯ ಬರೆದಿಟ್ಟು ...
'ನನ್ನ ಸಾವಿಗೆ ನಾನೇ ಹೊಣೆ'
ಮಾಂಸಿಕನಂತೆ
ರೈಲುಬಂಡಿಯ ಗಾಲಿಗಳು
ಛಿದ್ರ ಮಾಡಿದ ಮಾಂಸ ತುಂಡುಗಳನು
ಬಕ - ಕಾಕ
ಗಿಡುಗ - ಹದ್ದುಗಳು
ತನ್ನದಾಗಿಸಿತ್ತು ..
ಅಳಿದುಳಿದ ಮಾಂಸ ತುಂಡುಗಳ
ಮೂಟೆಯಲಿ ತುಂಬಿ
ಚಿತೆಗೇರಿಸಿದಾಗ
ವರುಣನ ಆರ್ಭಟ ...
ಅರೆಬೆಂದ ಮಾಂಸ
ಮಗದೊಮ್ಮೆ
ತೋಳ -ನಾಯಿ- ನರಿಗಳ
ಪಾಲು ....
ಪಾಪಿಯ ದೇಹವ
ಅಗ್ನಿಯೂ ಸ್ಪರ್ಶಿಸಲಿಲ್ಲ ... !!!!
(ಇದು ಬರೀ ಭಾವನೆಯಲ್ಲ ..)

ಬಾಲ್ಯ ........



ಬಾಲ್ಯದಲಿ ಶಾಲೆಗೆ
ನಡೆದ ದಾರಿಯಲಿಂದು
ಪುನಃ ಹೆಜ್ಜೆಯನಿಟ್ಟಾಗ ...
ದಾರಿ ನಡುವೆ
ನಾ
ಕಲ್ಲೆಸೆದು ನೋಯಿಸಿದ
ನೆಲ್ಲಿ
ಮಾವು
ಹಲಸಿನ ಮರಗಳ
ಪ್ರೀತಿಯ ನಗು
ಮನಸು -ಹೃದಯವ
ತಣಿಸಿದರೆ ...
ಗೆಳೆಯನ
ಮನೆಯೆದುರಿನ
ಬಾವಿಯ -
'ನೀರ ಸೇದಿ ಕುಡಿದು
ಸೆರಳೆ ನೀಗಿಸಿ
ಒಡಲು ತುಂಬಿ
ಮುನ್ನಡೆ'
ಎಂಬ ಸಾದರದ ನುಡಿ
ಇಂಪಾಗಿ ಕೇಳಿಸುತ್ತಿತ್ತು . ... !!!

ಹುಚ್ಚು ಮನಸು ...

ನನ್ನ
ಕಪ್ಪು ಬಿಳುಪಿನ
ಭಾವನೆಗಳಿಗೆ
ನೀ
ಹಚ್ಚಿದ ಬಣ್ಣವು
ನಿನ್ನ ವಿರಹದ
ಬೇಗೆಯಲಿ
ಮಾಸಿ ಹೋಗುತಿದೆ ...
ಮಗದೊಮ್ಮೆ
ಹೊಸ ಭರವಸೆಗಳ
ಹೊಸ ಕನಸುಗಳ
ಬಣ್ಣ ಹಚ್ಚಲು
ನೀ
ಬರುವಿಯೆಂದು
ಕಾಯುತಿದೆ

ಹುಚ್ಚು ಮನಸು ... !!!

ಮನೆಯಂಗಳದಲಿ ಕಂಪು ಸೂಸುವ ಅರಳಿದ ಸುಮ...

ಮುಸ್ಸಂಜೆ
ಬಾಡುವೆನೆಂದು
ತಿಳಿದೂ
ಮುಂಜಾನೆಯಿಂದ
ನಗುತ
ಮನೆಯಂಗಳದಲಿ
ಕಂಪು ಸೂಸುವ
ಅರಳಿದ ಸುಮದ
ನೋಟದಲಿ ....
ನನ್ನ ಅನುದಿನದ
ಧಾವಂತದ ಓಡಾಟ
ಬೇಸರ
ನೋವು -ಚಿಂತೆ
ತಲ್ಲಣವ
ನೋಡಿ
ಅಣಕಿಸುವ ಭಾವವಿದೆ ... !!!

ಮೊಗವು ಮುಗುಳ್ನಗೆಯ ನಟಿಸುತಿದೆ ...

ನನ್ನ 
ಹೃದಯದೊಳಗಿರುವ 
ನೋವವೃಕ್ಷವು 
ಬಾಡಹೊರಟೊಡೆ 
ನಿನ್ನ ನಗುಮೊಗದ 
ಭಾವವದಕೆ 
ಗೊಬ್ಬರ-
ನೀರ ಸುರಿದು 
ಹಸನಾಗಿಸುತಿದೆ ... 
ಮರು ಘಳಿಗೆಯಲೇ 
ಮೊಗವು 
ಮುಗುಳ್ನಗೆಯ 
ನಟಿಸುತಿದೆ ... !!!

ಕಣ್ಣೀರು ...


ಬಾಲ್ಯದಲಿ
ಬಯಸಿದ್ದು
ಪಡೆಯಲು 
ಬಳಸಿದ್ದ
ಅಸ್ತ್ರ ...
ಅದನೊರಸಿ
ಚಿಂದಿಯಾಗಿತ್ತು
ಅಮ್ಮನ
ಕರವಸ್ತ್ರ .... !!!

ಅಮ್ಮಾ .... ಮನಕೆ ಬಂದಿಲ್ಲ ವಸಂತ ...

ಅಮ್ಮಾ .... 
ವರುಷದ ಹಿಂದೆ 
ನಿನ್ನ ಅಗಲಿಕೆಯ 
ನೋವಿಂದ 
ನನ್ನೀ ಮನದ
ಮರದಿಂದುರುಳಿದ 
ಸಂತಸದ 
ಎಲೆ ಹಣ್ಣು ಕಾಯಿಗಳು ... ...
ಹಲವು ಋತುಗಳುರುಳಿದರೂ 
ಮನಕೆ ಬಂದಿಲ್ಲ 
ವಸಂತ ... 
ಚೈತ್ರದ ಚಿಗುರು ... 
ಸುಶ್ರಾವ್ಯದಿ ಹಾಡಿ 
ಮನವ ತಣಿಸಬಂದಿಲ್ಲ 
ವಸಂತದೂತ .......
ಮನವೆಂಬುದು 
ಹಸಿರ ಉಡುಪು ತೊಟ್ಟ 
ಒಣ ಮರ .... !!!
(ವಸಂತದೂತ = ಕೋಗಿಲೆ)

ಭಯ ...

ನಿನ್ನೆಯ
ಸತ್ತ ಕನಸುಗಳು
ಇಂದೆನ್ನ
ಹೃದಯವ
ಹಿಂಡುತಲಿರಲು ...
ನಾಳೆಯ
ಹೊಸಕನಸ
ಕಾಣಲು
ಭಯ ...!!!!

ಗಾಢ ಕತ್ತಲೆ ... !!!

ಸತ್ತು 
ಮಣ್ಣಾದ 
ಹಿರಿಜೀವಗಳು 
ಕನಸಲಿ ಬಂದು 
ನಕ್ಕು 
ಮಾತುಕತೆ 
ನಡೆಸುವ 
ಹೊತ್ತಿನಲಿ 
ಥಟ್ಟನೆ 
ಎಚ್ಚೆತ್ತು 
ಕಣ್ಣರಳಿಸಿ 
ನೋಡಲು 
ಕಂಡಿದ್ದು ...
ಕೋಣೆಯಲಿ .... 
ಜೊತೆಗೆ 
ಮನಸಿನಲಿ .... 
ಗಾಢ 
ಕತ್ತಲೆ ... !!!

'ಕತ್ತಲೆ' ನನಗಿಷ್ಟ

ಜಗವು ಮಲಗಿರಲು
ಎಚ್ಹೆತ್ತು
ಚಿತ್ತದಲಿ
ನೋವ
ಬೀಜವ
ಬಿತ್ತಿ
ಭಿತ್ತಿಯಲಿ
ಚಿಂತೆಯ
ಚಿತ್ತಾರ
ಬಿಡಿಸಲು
ಶಕ್ತಿನೀಡುವ
'ಕತ್ತಲೆ'
ನನಗಿಷ್ಟ

ಕಣ್ಣೀರ ಸಾಂತ್ವನ ...

ನಿನ್ನ 
ದೃಷ್ಟಿವಿಕ್ಷೇಪಕೆ 
ಸೋತ
ನನ್ನ ಕಣ್ಣುಗಳಿಂದು 
ನಿನಗಾಗಿ 
ದಾರಿಕಾಯುತ
ದೆಸೆಗೆಡುವುದ
ಕಂಡಾಗ
ನೊಂದ ಮನವು
ಕಣ್ಣೀರ ಕಳುಹಿ
ಸಾಂತ್ವನ
ಹೇಳುತಿದೆ ... !!!

ಮನಸು ಇಂದು ಬಿಕ್ಕುತಿದೆ ...



ನೀ
ಚುಚ್ಚಿದ
ಮಾತುಗಳ
ಇರಿತಕ್ಕೆ
ನಲುಗದ 
ಮನಸು
ಇಂದು
ಬಿಕ್ಕುತಿದೆ ...
ನಿನ್ನ
ಮೌನವ ನೋಡುತ... !!!

ನನ್ನ ನೋವ ಆಳವ ನೋಡಿರಬಹುದೇ ನಿನ್ನೊಡಲು .. ??



ಹೌದು ...
ವರುಷಗಳ ನಂತರ
ನೀನಿಂದು
ಸಿಕ್ಕಾಗ
ನಾ ನಕ್ಕಾಗ 
ಅಳುತ್ತಿತ್ತು
ನನ್ನೊಡಲು ...
ವರುಷಗಳ ಹಿಂದಿನ
ನಗುವ ತುಲನೆ ಮಾಡಿ ....
ಗೆಳತೀ ...
ನಿನ್ನ ಕಂಬನಿಯ
ನಾ
ಗಮನಿಸಿದೆ ...
ನನ್ನ ನೋವ ಆಳವ
ನೋಡಿರಬಹುದೇ
ನಿನ್ನೊಡಲು .. ??

ನೆತ್ತರ ಬಿಸಿ ನೆತ್ತಿಯಲಿ ನಲಿವಾಗ ........

ನೆತ್ತರ ಬಿಸಿ
ನೆತ್ತಿಯಲಿ
ನಲಿವಾಗ
ಹೆತ್ತಬ್ಬೆ-ಅಪ್ಪ
ಗುರುಗಳ ಮಾತುಗಳು
ಪೇಲವವಾಗಿ
ಕಂಡವನು
ಕೊನೆಗೊಮ್ಮೆ
ನೆತ್ತರ
ಬಿಸಿಯಾರಿ
ದಿಟವನರಿತು
ಹಿಂತಿರುಗಿ
ನೋಡಿದೊಡೆ
ಕಂಡಿದ್ದು
ಆವನ
ಹಂಗಿಸುತಿರುವ
ಅವನಿಗಿಂತ
ಕಿರಿಯವರು ... !!!
ಅಂದೊಮ್ಮೆ
ಕೇಳಿದ
ಹಿತವಚನಗಳು
ಪೊಂಬೆಟ್ಟದಲಿ ನಿಂತು
ತನ್ನತ್ತ
ಕೈತೋರಿ
ನೋಡಿ ಗಹಗಹಿಸಿ
ನಗುತಿರುವ
ಕನಸುಗಳು ... !!!

ಹೆಸರಲ್ಲೇನಿದೆ .... ???


ಪರೀಕ್ಷೆ ಮುಗಿದಿತ್ತು ..
ಉತ್ತರ ಪತ್ರಿಕೆಯ
ತಿದ್ದಿ ಮರಳಿಸುವ 
ಸಮಯ ....
ಜೀವ ಶಾಸ್ತ್ರದ
ಅಧ್ಯಾಪಕರಿಂದ
ಕೋಪದ ಕೂಗು ...
ಮೋಹನ್ ದಾಸ್ ....
ಕೈ ಚಾಚಿದಾಗ
ದಕ್ಕಿದ್ದು
ಬೆತ್ತದೇಟು ....
ಸೊನ್ನೆ ಅಂಕಕೆ ಸಂದ ಗೌರವ ...
ಇತ್ತ ಮೋಹನದಾಸ
ನೋವಿಗೆ ಅಳುತಿರಲು
ಹಿಂದಿನ ಬೆಂಚಿನಿಂದ
ನಗುವ ಶಬ್ದ ..
ಸೊನ್ನೆ ಅಂಕದ
ಯಥಾರ್ಥ ಒಡೆಯ
ಅವನೂ
ಮೋಹನ ದಾಸ
(ಆಳ್ವ) .... !!!

ಸ್ವಾಗತ ...

ವರುಷಗಳು
ಕಳೆದು
ಊರಿನತ್ತ
ತಿರುಗಿ ಬರುತಿರಲು ..
ದಾರಿಯುದ್ದಕ್ಕೂ
ಊನವಾದ
ಕನಸುಗಳು ...
ನನ್ನ ನೋಡುತ
ಏಳಲಾಗದೆ
ಮಂಡಿಯೂರಿ ,
ಪರಿಚಿತ
ಕಲ್ಲು ಮುಳ್ಳು
ಗಿಡ ಮರಗಳು
ಬಾಲ್ಯದ ಇತಿಹಾಸವ
ಕೆದಕುತಾ .....
ನನ್ನ
ಪರಿಚಿತ ಮೊಗದತ್ತ
ನೋಡಿ ನಗುತಾ
ಸ್ವಾಗತ ಕೋರುತಿತ್ತು ,, !!!

ಮನವು ನೊಂದಿರಲು -

ಮನವು
ನೊಂದಿರಲು -
ಲೇಖನಿಯು
ಅಕ್ಷರಗಳ
ಕೂಡಿಟ್ಟು 
ನಗುತಿತ್ತು ..
ಮಗದೊಮ್ಮೆ
ವಿರಹ ಗೀತೆಯ
ಬರೆವ
ಕನಸ ಕಾಣುತ .. !!!
*ಕಾಮನ್ಸಾರಿ ಮೂಡಂಬೈಲು*

ಅಲ್ಲಿ - ಇಲ್ಲಿ

ಅಲ್ಲಿ
ಸಾಗರದಲಿ
ಮುಳುಗಿದರೆ
ಸಿಗುವುದಂತೆ
ಹವಳ
ಮುತ್ತು ... 
ಇಲ್ಲಿ
ಹೊತ್ತು ಮುಳುಗಿದೊಡೆ
ಅತ್ತು ಕೇಳಿದೊಡೆ
ಮಾತ್ರ
ಸಿಗುವುದು ...
...........
ಅವಳ
ಮುತ್ತು ... 
*ಕಾಮನ್ಸಾರಿ ಮೂಡಂಬೈಲು *

ಮನಸಿನ ಗಾಯ ಇನ್ನೂ ಹಸಿ ಹಸಿ ...

ಗೆಳತೀ .... 
ವರುಷಗಳಿಂದ 
ಮರೆವಿನ 
ಮುಲಾಮು 
ಹಚ್ಹ್ಚುತಲಿದ್ದರೂ 
ನೀ
ಗೀಚಿದ ಮನಸಿನ
ಗಾಯ
ಇನ್ನೂ ಹಸಿ ಹಸಿ ... !!!

ಮೂರು ದಿನದ ಬಾಳಿನಲಿ ..

ಬುದ್ಧಿಯು 
ತುಂಬಿರಬೇಕಾದ 
ಮೆದುಳಲಿ 
ತುರುಕಿಸಿದ 
ಧರ್ಮದ ರವದಿಗೆ 
ಧ್ವೇಷದ ಬೆಂಕಿಯು
ತಗುಲಿ
ಮನುಕುಲದ
ಶಾಂತಿ-ಸಮಾಧಾನ
ಸುಟ್ಟು
ಬೂದಿ ಯಾಗುತಿದೆ

ಮೂರು ದಿನದ
ಬಾಳಿನಲಿ .. !!!!

ಪ್ರಣಯದಿ ಸೋತೆನಗೆ ...

ಪ್ರಣಯದಿ 
ಸೋತೆನಗೆ 
ಜೊತೆಯಾದ 
ಮದ್ಯ.. 
ಬರೆಯಕಲಿಸಿತು 
ವಿರಹದ
ಪದ್ಯ ... !!!

ಹಳ್ಳಿ ಮುದುಕ ...

ಹಳ್ಳಿ ಮುದುಕ ...
ಮಗ ದುಬೈಯಲ್ಲಿ ..
ಮಗನ ಹುಟ್ಟುಹಬ್ಬಕ್ಕೆ
ಹಳ್ಳಿ ಜನ್ರಿಗೆ
ಸಂಭ್ರಮ ... 
ಪಾಯಸ ಮಾಡಿದ್ರು
ಅಪ್ಪ ಅಮ್ಮಂಗೆ
ಬೇಸರ ...
ಮಗನಿಲ್ದೆ ...
ಅಮ್ಮನ್ ಸಲಹೆ
ಮಗನ್ಗೂ ಕಳ್ಸೋಣ ...
ಅಪ್ಪ ಅಮ್ಮ
ಪ್ಯಾಟೆಗ್ ಹೋದ್ರು
ಅಂಚೆ ಕಛೇರಿಲಿ
ಪಾಯ್ಸ ಮಡಿಕೇಲಿ ತುಂಬ್ಸಿ
ದುಬೈ ಅಡ್ರೆಸ್ಸ್ ಕೊಟ್ಟು
ಮಗಂಗೆ ಕಳ್ಸೋಕೆ ಹೇಳಿದ್ರು ..
ಇಂದು ಅಂಚೆ ಕಛೇರಿಲಿ
ಸಂಭ್ರಮ ...
ಎಲ್ರೂ ಪಾಯಸ
ತಿಂದ್ ತೇಗಿದ್ರು ..
ಒಂದ್ವಾರ ಕಳೆದ್ರೂ
ಮಗನ್ಗೆ ಪಾಯಸ
ತಲ್ಪಿಲ್ಲಂತೆ ...
ಅಪ್ಪ ಅಮ್ಮಂಗೆ
ಬೇಜಾರು ..
ಮಗದೊಮ್ಮೆ
ಪ್ಯಾಟೆ ಅಂಚೆ ಕಚೇರೀಲಿ
ವಿಚಾರಿಸಿದಾಗ
ತಿಳಿದ್ಬಂದಿದ್ದು
ಇಷ್ಟು ...
ಇಲ್ಲಿಂದ ಪಾಯಸ
ದುಬೈ ಗೆ ಹೋಗ್ತಿತ್ತು ..
ದುಬೈನಿಂದ ಯಾರೂ
ಕಳ್ಸಿದ ಒನಕೆನೋ
ಅದೇ ದಾರ್ಯಾಗ್
ಬರ್ತಿತ್ತು ..
ಒನಕೆ- ಮಡಿಕೆ
ಮುಖ ಮುಖೀಲಿ
ಮಡಿಕೆ
ಒಡೆದ್ ಹೋಗಿತ್ತು
ಪಾಯಸ
ಚೆಲ್ಲೋಗಿತ್ತು ... !!!
*ಕಾಮನ್ಸಾರಿ ಮೂಡಂಬೈಲು *

ಆ ಅಮ್ಮ ... ಶಬರಿ ..

ಅನುದಿನವೂ
ಕನಸು ಕಾಣುತಲಿದ್ದಳು
ಆ ಅಮ್ಮ ...
ಶಬರಿ ..
ಕೋಪಿಸಿ ಊರುಬಿಟ್ಟ
ಮಗನ
ದಾರಿ ಕಾಯುತ ...
ಕೊನೆಗೂ
ಬಂದ
ಶ್ರೀರಾಮನಂತೆ ...
ಅಮ್ಮ ನಗುತಿದ್ದಳು ...
ಬಿತ್ತಿಯಲಿ
ತೂಗುವ
ಚಿತ್ರದಲಿ ... !!!

ಹರುಷ - ವಿರಸ ...

ಕಾರಣ ...
ಮಡದಿಯ
ಮನದಲಿ
ಹರುಷ .. 
ಪತಿಯು
ಮಾಜಿ
ಪ್ರೇಯಸಿಯೊಂದಿಗೆ
ವಿರಸ ... !!!

ಸಾವಿನ ಕನಸು ನನಸಾಗಿದೆ ...

ಅವಳ ಆತ್ಮವೂ
ನಗುತಿರಬಹುದು
...
ಬಿತ್ತಿಯಲಿ
ತೂಗುವ 
ಭಾವಚಿತ್ರದಲಿ
ಧರಿಸಿರುವ
ಮಾಂಗಲ್ಯ ಸೂತ್ರವ
ಕಂಡು ...
ಮುತ್ತೈದೆ ಸಾವಿನ
ಕನಸು
ನನಸಾಗಿದೆ ... !!!

ಈ ಜಗವೇ ಹೀಗೆ

ಹೌದು ...
ಈ ಜಗವೇ ಹೀಗೆ
ಹಣವಿದ್ದರೆ
ಜೊತೆಗೂಡುವರು ..
ಹಣವಿಲ್ಲದವ
ಹೆಣ ... ??
ಹೆಣವ ಸುಟ್ಟರೆ
ಹೊಯ್ತು..
ಬೂದಿಯಾಯ್ತು ...
ಆದರೆ
ನವನಿಧಿಯೊಡೆಯ
ದಿವಾಳಿಯಾದೊಡೆ
ಬದುಕು
ಬತ್ತುಕಂದಿ ...
ಊರ ಕಟುಕರ
ನಾಲಿಗೆಯ
ಹರಿತಕೆ
ಬದುಕು
ಚಿಂದಿ ಚಿಂದಿ ...
( ಬತ್ತುಕಂದಿ= ಹಾಲು ಬತ್ತಿದ ದನ)

Friday, 14 March 2014

ಹರುಷವು ಹೊರಟು ವರುಷವಾಯ್ತು



ಹರುಷವು
ಹೊರಟು
ವರುಷವಾಯ್ತು
ಅಮ್ಮಾ ....
ನಿನ್ನ ನೆನಪಿನ್ನೂ 
ಹೆರಸಾಗಿಲ್ಲ

ಹೆದ್ದಟ್ಟು ಮೆದುಳಿಗೆ
ಸತ್ಯ ನೀತಿ ಧರ್ಮವ
ತುಂಬಿಸುವ
ಕಡುಗಜಕೆ
ತುಡುವು ಹಿಡಿದು
ಬರಡು ಹೃದಯದಲಿ
ಹಸಿರು ಬೆಳೆಯಲು
ಹೇತುವಾದ
ನಿನ್ನ ನೆನಪು -
ನಗುಮೊಗ
ಮಿಂಚಿ ಮರೆಯಾಗುತಿದೆ
ಪ್ರತಿ ನಿಮಿಷ ...

ಮಗದೊಮ್ಮೆ ಕಾಣೆನೆಂದು
ಖಚಿತವಿದ್ದರೂ
ಕಾಣುವ ಹಂಬಲ .. !!!

(ಹೆರಸಾಗು =ಅಳಿಸಿ ಹೋಗು
ಕಡುಗಜ = ಮಹತ್ಕಾರ್ಯ
ಹೆದ್ದಟ್ಟು = ದಡ್ಡ
ತುಡುವು = ಚುಕ್ಕಾಣಿ
ಹೇತು = ಕಾರಣ )

ಬದುಕು ಬತ್ತುಕಂದಿ ...



ಹೌದು ...
ಈ ಜಗವೇ ಹೀಗೆ
ಹಣವಿದ್ದರೆ
ಜೋತೆಗೂಡುವರು ..

ಹಣವಿಲ್ಲದವ
ಹೆಣ ... ??

ಹೆಣವ ಸುಟ್ಟರೆ
ಹೊಯ್ತು..
ಬೂದಿಯಾಯ್ತು ...

ಆದರೆ

ನವನಿಧಿಯೊಡೆಯ
ದಿವಾಳಿ ಯಾದೊಡೆ
ಬದುಕು
ಬತ್ತುಕಂದಿ ...

ಊರ ಕಟುಕರ
ನಾಲಿಗೆಯ
ಹರಿತಕೆ
ಬದುಕು
ಚಿಂದಿ ಚಿಂದಿ ...

( ಬತ್ತುಕಂದಿ= ಹಾಲು ಬತ್ತಿದ ದನ)

ಚಂದ್ರಜ್ಯೋತಿ...

ಅಮ್ಮಾ ... 
ಇಂದಿನ ಈ 
ಚಂದ್ರಜ್ಯೋತಿಯಲಿ 
ನಗುತಿರುವ 
ಪದ್ಮರಿಪನು 
ಕಂಡಾಗ
ಅನಿಸಿದ್ದು
ಅಂದು ನೀ
ಕೈತುತ್ತು
ಕೊಡುವಾಗ
ತೋರಿಸಿದ
ಚಂದಮಾಮನಿಗಿಂತಲೂ
ಚೆಂದವಿದೆಯೆಂದು ...

ಅಮ್ಮಾ ...
ನೀನಲ್ಲಿ
ನೆಲೆಸಿರುವಿಯಾ .. ???

(ಪದ್ಮರಿಪು =ಚಂದ್ರ
ಚಂದ್ರ ಜ್ಯೋತಿ =ಬೆಳದಿಂಗಳು )

ಇಂದು ತೆರಳಿದ್ದೆ ಆ ಸ್ವರ್ಗಕ್ಕೆ ಕನಸಿನಲಿ .....

ಹಿರಿಯರು ಹೇಳಿದ್ದರು .. 
ನಾನೂ ಓದಿದ್ದೆ 
ಕೇಳಿದ್ದೆ .... 
ಇಲ್ಲಿ ಒಳಿತ ಮಾಡಿದರೆ 
ಅಲ್ಲಿತೆರಳಿದಾಗ 
ನಗು ಮೊಗದಿ
ಸ್ವಾಗತಿಸುವರಂತೆ
ರಂಭೆ
ಊರ್ವಶಿ
ಮೇನಕೆಯವರು

ಇಂದು
ತೆರಳಿದ್ದೆ
ಅಲ್ಲಿಗೆ ಆ ಸ್ವರ್ಗಕ್ಕೆ
ಕನಸಿನಲಿ .....

ಸ್ವರ್ಗದರಮನೆಯಲಿ
ಏನೋ
ನಿರೀಕ್ಷೆಯಿಂದ
ಬಾಗಿಲು ಬಡಿದಾಗ
ಕಂಡಿದ್ದು
ಪರಿಚಿತ ಮುಖ ...

ಸ್ವಾಗತವಿಲ್ಲ
ನಗುಮೊಗವಿಲ್ಲ ..
ಅದೇ
ಸಪ್ಪೆಮೋರೆ ಹಾಕಿ
ಕುಲಿತಿದ್ದಳಲ್ಲಿ
ನನ್ನ
ಮಡದಿ ... !!!

Monday, 3 March 2014

ಹುಚ್ಚು ಮನಸಿನ ವಿರಹಿ ನೆನಪು .... !!!

ನಿನ್ನೊಡನೆ
ಕಳೆದ ದಿನಗಳನು
ಪೊಗಳ್ತಾ
ಬರೆಯೋಣವೆಂದರೆ -
ನಿರ್ವಚನೀಯ 
ಪದಗಳನು
ಕಸಿದು
ವಿರಹದ ಪದಗಳ
ತುರುಕಿ
ಒಳಗೊಳಗೇ
ನಗುತ
ನನ್ನ ಲೇಖನಿಗೆ
ವಿರಾಗಿಯ ವೇಷವ
ಕೊಟ್ಟು
ಅಟ್ಟಹಾಸದಿ
ನಗುತಿದೆ ...

ಹುಚ್ಚು ಮನಸಿನ
ವಿರಹಿ ನೆನಪು .... !!!

(ನಿರ್ವಚನೀಯ = ಹೇಳಲು ಯೋಗ್ಯವಾದ )

ಒಳಗಿರುವ ಮಬ್ಬಿಗ ಮನದ ಕೊಳೆ

ಹೊರಜಗದ 
ಕಣ್ಣಿಗೆ 
ಮಣ್ಣೆರಚಲು 
ಧರಿಸಿದ 
ಮನೀಷಿ 
ವೇಷ ...

ಟೊಪ್ಪಿ
ವಿಭೂತಿ
ಕಿರು ಶಿಲುಬೆ
ಜಪ ಮಾಲೆಗಳು ...

ಒಳಗಿರುವ
ಮಬ್ಬಿಗ ಮನದ
ಕೊಳೆಯನೆನಿತು
ತೊಳೆದೀತು ..???

(ಮನೀಷಿ = ಪಂಡಿತ, ಧಾರ್ಮಿಕ ಮುಖಂಡ
ಮಬ್ಬಿಗ = ರಾಕ್ಷಸ )

ಎಂದಿನಂತಿರಲಿಲ್ಲ ಇಂದೆನ್ನ ನಗುವ ಮನೆ ...

ಎಂದಿನಂತಿರಲಿಲ್ಲ 
ಇಂದೆನ್ನ
ನಗುವ ಮನೆ ... 

ಮುದ್ದು ಕಂದನ 
ತೊದಲು ಮಾತನಾಲಿಸದೆ
ಮನೆ ಮಲಗಿತ್ತು ..

ತೂಗು ತೊಟ್ಟಿಲಲಿ
ಮಗು ನಿದ್ರಿಸುತಿತ್ತು ... !!!

ಕೇಳಿಸುತಿದೆ ಓಂ ನಮಃ ಶಿವಾಯ ....

ಕೇಳಿಸುತಿದೆ 
ಓಂ ನಮಃ ಶಿವಾಯ .... 
ಓಂ ಕಾರ ನಾದ 
ಅಭ್ರಂಕಷದಲಿ ... 

ದರುಶನಕೆಂದು
ನೂಕು ನುಗ್ಗಲು ...
ಅನಶನವನಾಚರಿಸಿ
ಸಾಲಾಗಿ ನಿಂತ
ಭಕುತರ ಮನದಲ್ಲಿ
ಭಯ - ಭಕ್ತಿ

ಪಿನಾಕಿಯ
ಮೇಲಿದೆ
ಅಪ್ರತಿಮ
ಭಕುತಿ ...

ಜೊತೆಗೆ .....

ಜೇಬು, ಆಭರಣ
ಚಪ್ಪಲಿ, ಮೊಬೈಲು ....
ಇವುಗಳು ಕಳೆದು
ಹೋಗುವುದರ
ಭಯ .... !!!!

ಎಲ್ಲವನೂ
ಗಮನಿಸುತಲಿರುವನು
ಪರಮೇಶ್ವರ ... !!!

(ಅನಶನ =ಉಪವಾಸ
ಅಭ್ರಂಕಷ = ಮುಗಿಲು ಮುಟ್ಟುವಂತೆ
ಪಿನಾಕಿ = ಶಿವ )

ದೇಶ ಭಕ್ತಿ...

ಹೌದು 
ಅವನು ದೇಶ ಭಕ್ತಿಯ 
ಕುರಿತು 
ಬರೆವಾಗ 
ಕೆಲವರಿಗೆ 
ಅನುಮಾನ ....

ಕಾರಣವಿಷ್ಟೇ...
ಅವನು
ಮುಸಲ್ಮಾನ ....

ಜನರಿಗರಿವಿರುವುದು
ಅವನ ಹೆಸರು ...
ಮಹಮ್ಮದ ...

ತಿಳಿದಿಲ್ಲ ಅವರಿಗೆ
ಅವನಪ್ಪ
ಗಡಿ ಕಾಯೋ
ಯೋಧ ... !!!

'ಅಮ್ಮ' ಎಂಬ ಆಲದ ಮರ

ನೋವುಂಡ ಮನಕೆ 
ನೆರಳ ಕೊಟ್ಟು 
ಜೋಗುಳ ಹಾಡುತಿದ್ದ 
'ಅಮ್ಮ' ಎಂಬ 
ಆಲದ ಮರ 
ಕೊಡಲಿಯೇಟಿಲ್ಲದೆ
ನೆಲವ ಚುಂಬಿಸಿಯಾಯ್ತು ...

ಮನೆಯಲೊಂದು
ಹೊಸ ಗಿಡವು
ಮಗಳೆಂಬ ಹೆಸರಿನಲಿ
ಚಿಗುರಿ ಬೆಳೆಯುತಲಿದೆ ...

ಪರ್ಯಾಯವಲ್ಲದಿದ್ದರೂ-
ಬೇಗುದಿಯಲಿರಲು
ಮನವ ತಣಿಸುತಲಿದೆ
ಮುಗ್ದ ನಗು-
ತೊದಲು ಮಾತು ... !!!

ಅಮ್ಮನಿರಲಿಲ್ಲ ...

ತವರು ಮನೆಯಲಿ 
ನೋವ 
ತೆರೆದಿಡಲು 
ಬಾಯ್ತೆರೆದಾಗ 
ಅಮ್ಮನಿರಲಿಲ್ಲ ... 

ಅನತಿ ದೂರದಲಿರುವ
ಅಮ್ಮನ ಸಮಾಧಿ
ಮೇಲೆ
ಕೋಗಿಲೆಯೊಂದು
ಮನವ ತಣಿಸಲೆಂಬಂತೆ
ಸುಶ್ರಾವ್ಯದಿ
ಹಾಡುತ್ತಿತ್ತು ... !!!

ಹದಿನಾರರ ಹರೆಯ ...!!!

ಗೆಳತೀ ..... 
ಪಲಿತ ದೇಹಕೆ
ನಿನ್ನ ನೆನಪುಗಳು
ನುಸುಳಿ
ಕಿರಿದಾಗಿಸಿದೆ 
ವಯಸು ...

ಬದಲಾದ
ಮನಸಿಗೀಗ
ಹದಿನಾರರ ಹರೆಯ ...!!!

ಅಂದೊಮ್ಮೆ ನೀನಂದಿದ್ದೆ ....

ಅಂದೊಮ್ಮೆ 
ನೀನಂದಿದ್ದೆ 
ನನ್ನ ಪ್ರೀತಿಯಲಿ 
ಸಿಹಿಯ ಕಾಣುತಿಲ್ಲವೆಂದು 

ಗೆಳತೀ ...
ನೋಡಿಲ್ಲಿ

ನಾ ಉಸಿರಾಡದೆ
ಮಲಗಿರಲು
ಸಿಹಿಯ ಸವಿಯಲು
ನನ್ನ ಮುತ್ತಿರುವುದು
ಎಷ್ಟೊಂದು
ಇರುವೆಗಳು ... !!!

ಅಳುತಿದ್ದ ಉಡಿಕೂಸು ನಕ್ಕಿದ್ದು

ಹಸಿದು 
ಅಳುತಿದ್ದ 
ಉಡಿಕೂಸು 
ಬಾಯಿ ಚಪ್ಪರಿಸಿ
ನಕ್ಕಿದ್ದು 
ಮೊಲೆಹಾಲಿಲ್ಲದ
ಬಡ ತಾಯಿಯ
ಉಪ್ಪು ಕಣ್ಣೀರು
ತುಟಿಯಲಿ
ಬಿದ್ದಾಗ ... !!!

(ಉಡಿಕೂಸು = ಮಡಿಲಲ್ಲಿರುವ ಮಗು)

ಅಂದು ಕಾಣದ ಪ್ರೀತಿ - ಸಾಂತ್ವನ

ಅಂದು 
ಜೊತೆಯಿರಲು 
ಕಾಣದ 
ಪ್ರೀತಿ - ಸಾಂತ್ವನ 
ಇಂದು 
ಹುಲುಸಾಗಿ
ಕಾಣುತಿದೆ ..

ನನ್ನ ಗೋರಿಯ
ಮೇಲೆ
ನೀ ನಿಟ್ಟ
ಸುಮಗಳ
ರಾಶಿಯಲಿ ... !!!

ಸೋಲು ...


ನಗು ಮೊಗದ ಬೆಡಗಿ .. 
ಮೊದಲು 
ಕಂಡಿದ್ದು 
ಮುಗುಳ್ನಗುವಿನೆಡೆ
ಶುಭ್ರ ದಂತ ..
ಪ್ರೇಮ ಚಿಮ್ಮಿದ
ಮೊದಲ
ಹಂತ ...

ಮನವೊಂದು
ಪ್ರೀತಿಯ ಕುಬೇರ ..
ಮುಂಕಿರಿಸುತ
ನಗುವ ಮೋಹಿಸಿತು
ಮರುಳಾಯಿತು
ಕಪಟವನರಿಯದ
ಮೂಕ ...

ಒಳ ಮನಸ
ಕಂಡಿಲ್ಲ ...
ಹುಡುಕಿಲ್ಲ ..
ಕಪಟವನರಿಯಲಿಲ್ಲ ...
ಹಂತ ಹಂತದಲಿ
ಚಿಗುರಿದ
ಕನಸುಗಳು
ಪ್ರೇಮದ ನಗು
ಕೊನೆಗೆ ಧರಿಸಿತು
ಹಂತಕನ ಮುಖವಾಡ .. !!!

ಕಣ್ಣೀರ ತೊರೆ ... !!!

ಅಮ್ಮಾ .... 
ಅತ್ತೂ ಅತ್ತು 
ಬತ್ತಿಲ್ಲ 
ಕಣ್ಣೀರ 
ಕೆರೆ ... 
ನಿನ್ನ ಮೊಗವೆನ್ನ
ಮನದಲಿ
ಮಿನುಗಲು
ಮತ್ತೊಮ್ಮೆ
ಪುಟಿಯುವುದು
ಕಣ್ಣೀರ
ತೊರೆ ... !!!

ಪಯಣದ ಕೊನೆಯ ದಿನದಂದು ...

ಹೌದು ... 
ನನ್ನಮ್ಮ 
ನನಗಾಗಿ 
ಕಾದಿದ್ದಳು 
ಬಾಳ ಪಯಣದ 
ಕೊನೆಯ
ದಿನದಂದು ...

ಸಾವಿರಾರು
ಮೈಲಿ ದೂರದಿಂದ
ತನ್ನ ಮಗನ
ಬರುವಿಕೆಯ
ಕಾದು ..

ಗಂಧ
ಲೋಬಾನಗಳ
ಹೊಗೆಯ ನಡುವೆ
ಶ್ವೇತ ವಸ್ತ್ರವ
ಹೊದ್ದು
ಉಸಿರಾಡದೆ
ಕಣ್ಮುಚ್ಚಿ ಮಲಗಿ ... !!!

ಅಮ್ಮಾ....

ಅಮ್ಮಾ.... 
ಕಾರಿರುಳು 
ನಿನ್ನ ನಗುಮೊಗವೆನ್ನ 
ಮನದೊಲರಳಿ 
ಕನಸಾಗಿ 
ಕಾಡುತಿರಲು
ನಾ ನಗುವೆ
ನಿನ್ನ
ಮಡಿಲಲಿ
ತಲೆಯಿಟ್ಟು ....

ನಗುತ
ಕಣ್ತೆರೆದೊಡೆ
ಕಾರಿರುಳು
ಕಂಬನಿ ...

ಕಣ್ಣೀರನೊರೆಸಲು
ನೀನೆಲ್ಲಿ ... ???

ಅತ್ತೆ- ಮಾವಂದಿರ ಸ್ನೇಹ ಹಿತ ವಚನ- ಬುದ್ದಿ ಮಾತು...

ಅವಳ
ಅತ್ತೆ- ಮಾವಂದಿರ
ಸ್ನೇಹ
ಹಿತ ವಚನ-
ಬುದ್ದಿ ಮಾತು... 
ಇವೆಲ್ಲಾ
ತವರು ಮನೆಯ
ಮನಗಳಿಗೆ
ಕಿವಿಗಳಿಗೆ
ಅಣಕು
ಕುಹಕ
ಕುರೂಪ ... !!!

ಮನಸೊಂದು ಹುಚ್ಚು ಕಲಾವಿದ ....

ಅನುದಿನವು 
ನಿನ್ನ 
ನೆನಪಿನ 
ಕತ್ತಿ
ನನ್ನೆದೆಯ 
ಕುತ್ತುತಿರಲು
ಕನಲದ
ಮನ
ನಗುತ
ಹುಡುಕುವುದು
ತಡಕುವುದು
ವಿರಹದ
ಅಕ್ಷರಗಳನ್ನು ...
..........
ಈ ಮನಸೊಂದು
ಹುಚ್ಚು ಕಲಾವಿದ ....

ಬೆನ್ನಟ್ಟುವುದ ಬಿಟ್ಟಿಲ್ಲ ...

ನೀ ನನ್ನ 
ಬಿಟ್ಟು 
ಹೋಗಿದ್ದರೂ 
ಬೆನ್ನಟ್ಟುವುದ 
ಬಿಟ್ಟಿಲ್ಲ ... 

ನಿನ್ನ
ನೆನಪುಗಳು.

ಮುದ್ದು ಮಗು ಬೆಳೆದರೂ .........

ಮುದ್ದು ಮಗು 
ಬೆಳೆದರೂ 
ಬಿಡಲಿಲ್ಲ 
ಎದೆ ಹಾಲು... 
ಬರವಿಲ್ಲದ 'ತೊರೆ'
ನೋಯುತ್ತಿತ್ತು ...

ಹಸಿದ ಕಂದನ ಕಣ್ಣು
ತಾ ಒಲ್ಲೆ ಎಂದರೂ
ತನ್ನೆದೆಯತ್ತ
ನೋಡುತಿತ್ತು

ಮೊಲೆ ತೊಟ್ಟಿನಲಿ
ಲೇಪಿಸಿದ ಕಹಿಯ
ರುಚಿ ಉಪ್ಪಾಗಿತ್ತು ...

ಹೆತ್ತಬ್ಬೆಯ
ಕಣ್ಣೀರ ಹನಿ
ಕಹಿಯ
ತೊಳೆದಿತ್ತು .... !!!

(ತೊರೆ ಎಂಬುದಕ್ಕೆ "ಎದೆಯಲ್ಲಿ ಹಾಲು ತುಂಬಿ " ಎಂಬ ಅರ್ಥ ವಿದೆ )

ನನ್ನ ಬಿಗಿದಪ್ಪಿಕೋ .....

ನಿನ್ನವಳನು 
ಬರಹದಲಿ 
ಪೊಗಳ್ತಾ 
ನಕೀಬನಂತಾಗದೆ 
ನಕ್ತಭೋಜನವನುಂಡು 
ನನ್ನ
ಬಿಗಿದಪ್ಪಿಕೋ .....
ಎನುತಿರುವಳು
ನನ್ನವಳು

ನನ್ನ
ಅನುದಿನವು
ಮುದ್ದಿಸಿ
ಬಿಗಿದಪ್ಪುವ
ನಿದಿರಾ ದೇವಿ ...

***ಶುಭ ರಾತ್ರಿ ****

(ನಕೀಬ = ಮಹಾರಾಜರ ಹೊಗಳು ಭಟ
ನಕ್ತಭೋಜನ = ರಾತ್ರಿಯ ಊಟ )

feb 14th evening..



"ಸಾಕು
ಹೊತ್ತು ಮುಳುಗುವ
ಹೊತ್ತಾಯ್ತು ...
ಸುಸ್ತಾಯ್ತು ...
ಇನ್ನು 
ಹೃದಯದ
ಮೂಲೆಯಲಿ
ಮಲಗೋಣ ...

ಮಗದೊಮ್ಮೆ
ಹನಿ ಹನಿಯಾಗಿ
ನೆನಪುಗಳ
ಮಳೆಯಾಗಿ ಸುರಿಯೋಣ
ಇವರ ಅಕ್ಷಿಗಳಲೇ .. "

ಎನುತಿದೆ
......................
ಇಂದು ಪಿಸುಗುಟ್ಟಿದ
ಪ್ರೀತಿ -ಪ್ರೇಮದ
ಸವಿಮಾತುಗಳು..

ನೆನಪಿಸುತಿದೆ ನನ್ನ ನಾಸಿಕ ...

ಅಂದೊಮ್ಮೆ 
ನಿನ್ನ 
ಮುದ್ದಿಸುತಿರಲು 
ಸವಿದ 
ಫೇರ್ & ಲವ್ಲಿಯ
ಸುವಾಸನೆಯನು
ಇಂದು
ನೆನಪಿಸುತಿದೆ
ನನ್ನ
ನಾಸಿಕ ... !!!