Saturday, 25 January 2014

ಅಮ್ಮಾ ...

ಅಮ್ಮಾ ... 
ನಿನ್ನ ಗೋರಿಯ ಬಳಿ 
ಅಳುತ ಕುಳಿತಿದ್ದೆ .. 
ಸರ್ವಸ್ವವನು 
ಕಳೆದು ಕೊಂಡವನ 
ಮನೋಸ್ಥಿತಿ ...

ಕಣ್ತೆರೆದೊಮ್ಮೆ
ನೋಡಲು ಗೋರಿಯ
ಮೇಲೊಂದು
ಬೀಜದ ಮೊಳಕೆ ...

ನೋವಿನಲೊ ನಾನರಿಯೆ
ನಾನದಕೆ
ಹೆಸರಿಟ್ಟೆ ...
"ವಿರಹದ ಕವನ ... "

ಅದ ಕಿತ್ತು ತಂದು
ನಾ ನೆಟ್ಟೆ
ನನ್ನೀ ಹೃದಯದಲಿ ...

ಅನುದಿನವೂ
ಆ ಸಸಿಗೆ
ನಿನ್ನ ನೆನಪಿನ
ನೀರೆರೆಯುತಿರುವೆ ... !!!

ನಿನ್ನ ನಗುಮೊಗ ..



ನಿನ್ನ ನಗುಮೊಗ
ನನ್ನೀ ಮನದೊರಳಲು
ಕಾರಿರಳ ಹೃದಯದಲಿ
ಕಾಣುವುದು
ಹುಣ್ಣಿಮೆಯ ಬೆಳಕು ...

ನಿನ್ನ ನೆನಪು ..

ಮುಸ್ಸಂಜೆಯಲಿರುವ 
ಮುಪ್ಪಾದ 
ದೇಹ-
ಮನ ... 
ನಿನ್ನ ನೆನಪು 
ನುಸುಳಿದೊಡೆ
ಮುಂಜಾನೆಯ
ಹುರುಪು ... !!!

ಗೆಳೆಯಾ ....

ಗೆಳೆಯಾ .... 
ಮಾತಿನಲಿ 
ನಗುವಿನಲಿ 
ವಿಷ ಬೆರೆಸಿ 
ನನ್ನೀ ಹೃದಯದಲಿ 
ತುಂಬುತಿರಲು
ನಾನಂದಿದ್ದೆ
ಮಧುವೆಂದು ...

ಇಂದು
ಹುಚ್ಚು ಮನಸಿನೊಳಗುರಿವ
ಕಿಚ್ಚನು ಆರಿಸಲಾಗದೆ
ತೊಳಲಾಡುವ
ನೋವಿನಲೂ
ಬೆಚ್ಚಗೆ ನಗುವೆ ..

ವಿಷವನ್ನು
ಮಧುವಂತೆ
ಸವಿದಾಗ ಪಡೆದ
ಹುಚ್ಚು ಅನುಭವವದ
ದಿನಗಳನು ನೆನೆದು ....

ಪ್ರೀತಿಯ ಒರತೆ ..

ಪ್ರೀತಿಯ ಒರತೆ 
ಬತ್ತಿ ಹೋದರೂ... 
ಬತ್ತಿಲ್ಲ 
ಕಣ್ಣೀರ 
ಒರತೆ ... 

ಲಯವಿಲ್ಲದ
ಕವನಗಳಲ್ಲಿ
ಮುಗುಳ್ನಗುತ
ವಿರಹವನು
ಓಲೈಸುತಿದೆ . .. !!!!

ಭಾರತಾಂಬೆ..


ಭಾರತಾಂಬೆಯ
ಶಾಂತಿಯ ಬಿಂಬಿಸುವ 
ಏಕತೆಯ ಸಾರುವ 
ರಾಷ್ಟ್ರ ದ್ವಜದ 
ಬಣ್ಣಗಳಿಗೆ 
ಹಚ್ಚದಿರಿ
ಜಾತಿ-ಧರ್ಮದ
ಬಣ್ಣ ...

ಕೇಸರಿಗೊಂದು
ವಾರಸುದಾರ ..
ಹಸಿರಿಗೊಂದು
ವಾರಸುದಾರ ...

ಹಸಿರು-ಕೇಸರಿಯು
ನುಜ್ಜು-ಗುದ್ದಾಡಿದೊಡೆ
ನಡುವಲಿರುವ
ಶಾಂತಿಯ ಸಂಕೇತ
ಶ್ವೇತ ವರ್ಣ-
ಅಹಿಂಸೆಯ ಸಂಕೇತ
ಅಶೋಕ ಚಕ್ರ
ಬಡವಾದೀತು ....

ಸ್ತ್ರೀ ಹೃದಯ ...

ಬೇನೆ 
ತಾಳಲಾರದೆ 
ಗೊಗ್ಗರೆದು 
ಅಳುತಿದ್ದ 
ಸ್ತ್ರೀ ಹೃದಯ 
ನಿಮಿಷದಲಿ
ನಕ್ಕಿದ್ದು
ಮುಗ್ಧ
ಮಗುವಿನ
ಅಳುವಿನ
ಧ್ವನಿಯ
ಇಂಪು ಕೇಳಿ ... !!!

ಪಂಪ ರನ್ನ ಜನ್ನ ಪೊನ್ನ ...

ಪಂಪ ರನ್ನ ಜನ್ನ ಪೊನ್ನ ... 
ಇನ್ನೇನೊ ಹೆಸರಿನ 
ಮಹಾಕವಿಗಳ ಬರಹಗಳು 
ಇಲ್ಲಿ
ಮುಖ ಪುಟ ದಲ್ಲಿ 
ಬರೆದ ಗದ್ಯ-ಪದ್ಯಗಳಿಗೆ
ಹರಿದು ಬರುವ
ಲೈಕುಗಳ ನೋಡಿ -
'ಲೈಕು ಗಳೆಂದರೆ
ಬರಹ
ನಾ ಲಾಯಕ್ಕು ....'
ಎಂದು ಅರ್ಥೈಸಿ
ಒಳಗೊಳಗೇ
ನಗುತಿರಬಹುದೆನೋ .... !!!

ಸ್ವರ್ಗ ಸುಖವೆಂದರೆ..

ಸ್ವರ್ಗ ಸುಖವೆಂದರೆ,
ಕನಸಲಿ 
ನೀ 
ಬಂದೆನ್ನ 
ತಬ್ಬಿ ... 
ತುಟಿಗಳಲಿ
ಬಂಧಿಸಿ
ಕಚಗುಳಿಯಿಟ್ಟಾಗ
ನನಗರಿವಿಲ್ಲದೆ
ಉಟ್ಟ ಬಟ್ಟೆ
ನೆನೆದ
ಘಳಿಗೆಯ
ಅನುಭವ ವಿರಬಹುದೇ .. ???

ನಶ್ವರ ಜಗದಲ್ಲಿ ...

ನಶ್ವರ ಜಗದಲ್ಲಿ
ಹೆತ್ತಬ್ಬೆಯನು ಮರೆತು 
ಭಗವಂತ 
ಹುಡುಕುತ್ತಾ 
ಹೋದವನಿಗೆ 
ದರ್ಶನವಾಗಲಿಲ್ಲ
ಜಗದೀಶ್ವರ ....

ಸೋತು ಹೋಗಿ
ತಿರುಗಿ ಬಂದವನ
ಮನದಲಿ
ಅನುಮಾನ...
ಅವನಿರುವನೊ ....??

ಪಶ್ಚಾತ್ತಾಪದಲಿ ಕೊರಗಿ
ಮಾತೆಯ
ಕಾಲಿಗೆರಗಿದೊಡೆ
ದಿಘ್ಭ್ರಮೆ ...

ಮೃದು ಕರಗಳು
ತಲೆಯ ನೇವರಿಸುತಿರಲು
ಪಾದ ಸ್ಪ್ರಶವು
ಭಗವಂತನ ಇರುವಿಕೆಯ
ವಿವರಿಸುತಿತ್ತು ... !!!

ಕಹಿ ನೆನಪುಗಳು ....

ಕೆಲವೊಂದು ಸವಿನೆನಪುಗಳೆನ್ನ 
ಬೆಟ್ಟೆಬ್ಬಿಸಿ ನಗಿಸುವ 
ಮರು ಗಳಿಗೆಯಲೇ -
ಬೆಚ್ಚಗಾಗಿಸುವುದು 
ಕಹಿ ನೆನಪುಗಳು .... 
ಹುಚ್ಚೆದ್ದು ಕುಣಿವ ಮನವು 
ಹುಚ್ಚನಂತೆ ನಗಲು ... !!!

ಹೂವಿನಂತೆ ಹಗುರ ..

ಹೂವಿನಂತೆ 
ಹಗುರ
ನನ್ನೀ ಹೃದಯ ... 
ಆದರೆ
ನಿನ್ನ 
ನೆನಪುಗಳು
ನುಸುಳಿದರೆ
ಮಣ ಭಾರ ...!!!

ಬಾಲ್ಯದ ದಿನಗಳ ಹಿಂತಿರುಗಿ ನೋಡಿದಾಗ .

ಮಣಭಾರದ ಪುಸ್ತಕದ 
ಚೀಲವನು 
ಹೊತ್ತು 
ದಾರಿ ಸವೆಸಲು
ಹುಚ್ಹು ಬಯಕೆ ....

ದಾರಿ ಮಧ್ಯದಲಿ
ಗೊಂಚಲ
ನೆಲ್ಲಿಕಾಯಿ ಮರಕೆ
ಕಲ್ಲೆಸೆಯಲು
ಹುಚ್ಹು ಬಯಕೆ ...

ಕಾಕನ ಅಂಗಡಿಯ
ಮುರುಕು
ಬೆಂಚಿನಲಿ ಕೂತು
ಐಸ್ ಕೇಂಡಿ ಚೀಪಲು
ಹುಚ್ಹು ಬಯಕೆ ..

ಕೆರೆಬದಿಯಲಿ ಕೂತು
ಎರೆ ಹುಳವ
ಗಾಳಕೆ ಸುತ್ತಿ
ಮೀನು ಹಿಡಿಯಲು
ಹುಚ್ಚು ಬಯಕೆ ...

ಊರ ಗೆಳೆಯರ
ಜೊತೆಯಲಿ
ಜಗಳವಾದುತ
ಕಬಡಿ ಆಟವಾಡಲು
ಹುಚ್ಚು ಬಯಕೆ ...

ಮಾರಿ ಜಾತ್ರೆಯಲಿ
ಸಂತೆ ಬೀದಿಯ ಓಣಿಯಲಿ
ಅವಿತು ಕುಳಿತು
ಬೀಡಿ ಸೇದಲು
ಹುಚ್ಚು ಬಯಕೆ ...

ಮುರುಕು ಚಪ್ಪರ ಹಾಕಿ
ಗೆರಟೆಯ ತಕ್ಕಡಿ ಮಾಡಿ
ದಿನಸಿ ಅಂಗಡಿಯವನಂತೆ
ವ್ಯಾಪಾರಿಯಾಗಲು
ಹುಚ್ಚು ಬಯಕೆ ...

ಸವೆದ ದಾರಿಯಲಿ
ಮರು ಹೆಜ್ಜೆಯ ಹಾಕಿ
ನೆನಪ ಜೋಳಿಗೆಯಲಿಟ್ಟು
ದಾರಿ ಸವೆಸಲು
ಹುಚ್ಚು ಬಯಕೆ ......

"ಕವಿ "

ಹೌದು... 
ಪದಗಳಿಗೆ 
ಹೃದಯ ಕೊಟ್ಟವನು ... 
ಕವನಗಳಿಗೆ 
ಹೃದಯ ಕೊಟ್ಟವನು 
ಕೊನೆಗೆ ...
ಹೃದಯವಿಲ್ಲದ
ಜಗವ ಕಂಡು
ಹೃದಯವಿಲ್ಲದ
ಪ್ರೀತಿಯ
ಅನುಭವಿಸಿ
ಹೃದಯ ಒಡೆದು
ಮಣ್ಣಾದವ ...
"ಕವಿ "

ಧಣಿ ಮನೆಯ ಒಕ್ಕಲು ದಲಿತ ಕುಟುಂಬ ...

ಧಣಿ ಮನೆಯ 
ಒಕ್ಕಲು 
ದಲಿತ 
ಕುಟುಂಬ ... 

ಗಂಡು ಜೀವಗಳಿಗೆ
ಹಗಲಿರುಳೆನ್ನದೆ
ತೋಟದ
ಕೆಲಸ ....
ಹೆಣ್ಣು ಜೀವಗಳಿಗೂ
ಕೈತುಂಬಾ
ಕೆಲಸ ...
ಅಗರಬತ್ತಿ
ತಯಾರಿಕೆಯ
ಗುಡಿ ಕೈಗಾರಿಕೆ ....

ಕೊನೆಗೊಂದು ದಿನ ...
ಧಣಿಯ
ಅಗಲಿಕೆಯ ನೋವಿನಲೂ
ಒಕ್ಕಲು ಕುಟುಂಬದ
ನೊಂದ ಮನದಲ್ಲಿ
ಪ್ರತ್ಯುಪಕಾರ- ನೆಮ್ಮದಿಯ
ನಗೆ ....

ಗಂಡು ಜೀವಗಳು
ಮರ ಕಡಿದು
ಚಿತೆಗೆ
ನೆರವಾದರೆ ...
ಹೆಣ್ಣು ಜೀವಿಗಳ
ದುಡಿತ-
ಗಂಧದ ಕಡ್ಡಿ
ಮರಣ ಮನೆಯ
ಧಣಿಯ ಒಡಲ
ಅಂತ್ಯವಿಧಿ ಕರ್ಮದಲಿ
ಸುಗಂಧ
ಪಸರಿಸುತ್ತಿತ್ತು .... !!!

ನಿನ್ನ ಮಡಿಲಲೊಮ್ಮೆ ತಲೆಯಿಟ್ಟು ಮಲಗುವಾಸೆ...

ನಿನ್ನ ಮಡಿಲಲೊಮ್ಮೆ 
ತಲೆಯಿಟ್ಟು 
ಮಲಗುವಾಸೆಯಿಂದ 
ಅಮ್ಮಾ ಎಂದು 
ಕರೆದು 

ಒಳಹೊಕ್ಕಡೆ
ಕಂಡಿದ್ದು
ನನ್ನ ಕರೆಯ
ಕೇಳಿ
ಒಳಗೊಳಗೇ
ರೋಧಿಸುತ್ತಿರುವ
ನಿನ್ನ ಮಂಚ ...

ಅಮ್ಮಾ ...
ಅದೂ
ನನ್ನಂತೆ
ಅನಾಥ ... !!!

Friday, 10 January 2014

ಹುಣ್ಣಿಮೆಯ ಬೆಳಕಿಗೂ ತಿಳಿದಿತ್ತು .... !!!

ನಿನ್ನೆಯ ರಾತ್ರಿಯಲಿ 
ಮಸಣವಿಡೀ 
ಪ್ರಕಾಶಿಸುವುದ 
ಕಂಡು 
ನಿಬ್ಬೆರಗಾಗಿ 
ನೋಡಲು 
ನಾ ಕಂಡೆ .... 

ನಿನ್ನ ಗೋರಿಯಲಿ - 
ನಿನ್ನ ಹೆಸರು 
ಜನನ -ಮರಣ
ವಿವರಗಳ ಕೆತ್ತಿದ
ಅಮೃತ ಶಿಲೆಯ ಮೇಲೆ
ಹುಣ್ಣಿಮೆಯು
ಸೂಸುವ
ಹಾಲುಗಲ್ಲದ
ನಗು ...

ನಿನ್ನ ಜನನದ
ದಿನಾಂಕ
ಹುಣ್ಣಿಮೆಯ
ಬೆಳಕಿಗೂ
ತಿಳಿದಿತ್ತು .... !!!

Thursday, 9 January 2014

ಉಸಿರಿನಲಿ ನೀನಿಲ್ಲದೆ ಹಸಿರಿಲ್ಲ ...

ನೀ ನನ್ನ 
ಉಸಿರೆಂದು 
ನೆನೆದಿದ್ದ 
ಅಂದಿನ ದಿನಗಳಲಿ 
ಜೀವನವೂ 
ಹಸಿರಾಗಿತ್ತು ..
ಇಂದು ಮುದಿಯಾದ
ಉಸಿರಿನಲಿ
ನೀನಿಲ್ಲದೆ
ಹಸಿರಿಲ್ಲ ...

ಒಣ ಮರದ
ಒಣ ಮನದ
ತರಗೆಲೆಗಳಂತೆ
ಕಾಣುವ
ನೆನಪುಗಳಿಗೆ
ಆಗೊಮ್ಮೆ -ಈಗೊಮ್ಮೆ
ಎಂಬಂತೆ
ಚಿಗುರು ಬರುತಿದೆ
ವಿರಹದ ಪದಗಳು ...

ಹುಚ್ಚು ಮನದೊಳಗೆ
ಹಸಿರ ಉಸಿರು
ಎಂದಾದರೊಮ್ಮೆ
ಎಲ್ಲೋ
ಮನದ ಮೂಲೆಯಲ್ಲಿ
ಚಿಗುರಬಹುದೆಂಬ
ಹುಚ್ಚು ಭ್ರಮೆಯ
ಮನದಲ್ಲಿ
ಮೂಡಿಸಲೆಂಬಂತೆ
ವಿರಹದ
ಒಣ ಚಿಗುರು .... !!

ಹುಚ್ಚು ಮನಸು ....

ಅಂದು 
ನಿನಗಾಗಿ ಕಾದಿದ್ದ 
ಓಣಿಯಲಿಂದು 
ನಿಂತಿದ್ದೆ 
ಒಂದರೆ ಘಳಿಗೆ ... 
ನಿನ್ನ ಬರುವಿಕೆಗೆ
ಕಾದು ...
ಹುಚ್ಚು ಮನಸು ....

ಅಂದು ನಿನ್ನ ಥಳುಕು ಬಳುಕ
ಇಣುಕಿ ನೋಡುತಿದ್ದ
ಕಾಕನ ಅಂಗಡಿಯ
ಮುರುಕು ಬೆಂಚಿನಲಿಂದು
ಕುಳಿತು ಕಾದಿದ್ದೆ ...
ನಿನ್ನ ಬರುವಿಕೆಗೆ ಕಾದು
ಹುಚ್ಚು ಮನಸು ....

ಕರ್ಕಶ ಶಬ್ಧವ
ಹೊರಡಿಸಿ ಓಡುವ
ಆ ಬಸ್ಸಿನ ಸೀಟಿನಲಿ
ಪುಸ್ತಕವನಿಟ್ಟು
ಆಸನವ ನಿನಗಾಗಿ
ಕಾಯ್ದಿರಿಸಿದೆ
ಕುಳಿತುಕೊಳ್ಳಲು ನೀನಿಲ್ಲ ...
ಹುಚ್ಚು ಮನಸು ...

ವರುಷಗಳುರುಳಿದರೂ
ಹರುಷದ ನಿಮಿಷಗಳ
ಮರೆತಿಲ್ಲ ...
ಇನ್ನೂ ಜೀವಂತವಾಗಿದೆಯೆಂಬ
ಕಲ್ಪನೆಯಲಿ
ಜೀವಿಸುತಿದೆ

ಹುಚ್ಚು ಮನಸು ... !!!

ಅಲ್ಲೊಂದು ಮಾಂಗಲ್ಯ ಸದನ ...

ಅಲ್ಲೊಂದು 
ಮಾಂಗಲ್ಯ ಸದನ ... 
ವಾದ್ಯ ... 
ಗಟ್ಟಿ ಮೇಳ ..
ಬಾಡೂಟ.. 
ಸಂಗೀತ ಕಚೇರಿ ..
ನೃತ್ಯ -ನಲಿವು ...

ಸಂತಸ ಪಡಲು
ಸಂತಸವ ಹುಡುಕಲು
ಹಲವು ನೆಪಗಳು ...

ಉದರ ತುಂಬುವ
ತವಕ -ಸಂತಸದೆದುರು
ಇನ್ನೆಲ್ಲ ಸಂತಸವೂ ಶೂನ್ಯ ...

ಆದರೆ ಅಲ್ಲೊಬ್ಬಳು
ಮುದಿ ಪಾರ್ವಿತಿಯ
ಹಾಜರಿ ...
ವಿಸ್ಮಯ ಗೊಳಿಸಿತ್ತು ...

ಪಕ್ಕದ ಮನೆಯ
ಪ್ರೀತಿಗೆ ಓ ಗೊಟ್ಟು
ಬಂದ
ಸಂಪ್ರದಾಯಸ್ತೆ ..

ಬಯಸಿದ್ದು ..
ಬಂದಿದ್ದು ..
ಸಂಗೀತ ಕೇಳಲಲ್ಲ ...
ನೃತ್ಯ ಮಾಡ ಲಲ್ಲ ...
ಬಾಡೂಟ ಮಾಡಲಲ್ಲ ...

ನೆರೆ ಮನೆಯ
ಹುಡುಗಿಗೊಂದಿಷ್ಟು
ಅಕ್ಷತೆ ಹಾಕಿ
ಶುಭ ಕೋರಲು .. !!!

( ಪಾರ್ವಿತಿ = ಬ್ರಾಹ್ಮಣ ಸ್ತ್ರೀ )

ಸ್ನೇಹದ ಪಿಪಾಸೆಯ ...

ಸ್ನೇಹದ ಪಿಪಾಸೆಯ 
ಅರುಹುತಲಿರಲು 
ಪೆಕ್ಕಳ ಮಾತಿನಲಿ 
ಅಂದು 
ನೀ ನನಗೆಸೆದ 
ಪಂಚೇಷು
ನನ್ನದೆಯನಿನ್ನೂ
ತಿವಿಯುತಿದೆ ...
ಅದಿನ್ನೆಷ್ಟು
ದಿನವಿದೆಯೂ
ಕೊರೆಯುತಲಿರಲು ....
ನಾನರಿಯೆ
ಪಲುಬಲಿರುವ
ದಿನವೆನಿತೂ ... !!!

(ಪಿಪಾಸೆ=ದಾಹ , ಪಕ್ಕಳ =ಗರ್ವ
ಪಂಚೇಷು = ಗುರಿಯಿಟ್ಟ ಬಾಣ
ಪಲುಬು =ದುಃಖಿಸು )

ನನ್ನ ನಗು- ನೋವ ಮರೆಯಲು ನಾ ತೊಡುವ ಮುಖವಾಡ ...

ನನ್ನ ನಗು 
ಮನದೊಳಗಿನ 
ನೋವ ಮರೆಯಲು 
ನಾ ತೊಡುವ 
ಮುಖವಾಡ ... 

ನನ್ನ ಮುಖವಾಡ ನೋಡಿ
ನೀ ನಗುವೆ
ನೋವ ಕಾರಣ
ನೀನೆಂದು
ನಿನಗರಿವಿದ್ದರೂ ..

ನನ್ನದೊಂದು
ಕಿರು ಪ್ರಾರ್ಥನೆ ...

ಮುಖವಾಡವಿಲ್ಲದ
ನಗಲೆನಗೊಂದು
ಕಾಲ ಬಂದರೆ....
ನನ್ನ ನಗುವ ಕಂಡು
ಇನ್ನೊಂದು
ಹೃದಯವು
ನೋಯದಿರಲಿ ... !!!

ಹದಿ ಹರೆಯದ ಹೂವ ಮಾರುವ ಸುಂದರಿ ಹೆಣ್ಣು....

ಹದಿ ಹರೆಯದ 
ಹೂವ ಮಾರುವ 
ಸುಂದರಿ ಹೆಣ್ಣು.... 

ಹಲವು 
ಪ್ರಣಯದ
ಅ ಆ ಇ ಈ
ಬರೆಯಲು
ಹೂವ ಕೊಟ್ಟು
ಜೇಬು ತುಂಬಿದವಳ
ಮನಸು ಕೇಳುತಿತ್ತು ...

ನಿನಗಾಗಿ
ಹೂವ
ಕೊಡುವವನು
ಎಂದು ಬರುವನೆಂದು
..................
ಪ್ರೇಮ ಬೆಳಗಲು
ಬೆಳಕ ಕೊಟ್ಟವಳಿಗೆ
ಪ್ರೇಮದ ಪರಿವೆಯೇ
ಇರಲಿಲ್ಲ ... !!!

ಕವಿತೆಯ ಬೀಜಗಳು ..

ಮನಸು 
ಹಸಿರಾಗಬಹುದೆಂಬ 
ಹುಚ್ಚು ಕಲ್ಪನೆಯಿಂದ 
ನಾನೂ ಅಳತೊಡಗಿದೆ 
ಬಾನ ಅಳುವಿಗೆ 
ಹಸಿರಾದ
ಭುವಿಯ ಕಂಡು...

ಹಸಿರಾಗಲಿಲ್ಲ ..

ವ್ಯಥೆಯು ಮುಡುಗಟ್ಟಿ
ಬಸಿರಾಗಿ ಮುಕ್ಕುರಿವ
ಮನದೊಳಗಿಂದ
ಮೊಳಕೆಯೊಡೆದವು
ವಿರಹದ ಪದಗಳ ಹೊತ್ತು
ಕವಿತೆಯ
ಬೀಜಗಳು .. !!!

ನಗುತಲಿರುವೆ ಉರಿವ ನೋವಿನಲೂ ...!!!

ಮನತುಂಬ 
ದುಗುಡ 
ದುಮ್ಮಾನವಿದ್ದರೂ 
ನಗುತ ದಿನವ
ದೂಡುತಲಿರೆಂದ
ಹೃದಯದ
ಸಂದೇಶವ
ತುಟಿಗಳು
ಪಾಲಿಸುತಿವೆ ...
ಅನುದಿನ
ನಾ
ನಗುತಲಿರುವೆ
ಉರಿವ
ನೋವಿನಲೂ ...!!!

ಬದುಕಿನ ವಿಪರ್ಯಾಸ ... !!!

ಮಧ್ಯ ರಾತ್ರಿ 
ಕಳೆದೂ 
ಬಾರಿನಲಿ ಕೂತು 
ಹೊಸ ವರುಷವ 
ನೆಪ ಮಾಡಿ 
ಮಜಾ ಮಾಡುತಿದ್ದ
ಯುವಕನಿಗೆ
ತಾನು
ಸಂಭ್ರಮಿಸುವಾಗ
ತನಗಾಗಿ
ನಿದ್ದೆಗೆಟ್ಟು ದಾರಿಕಾಯುತಿರುವ
ಅಮ್ಮ-ಮಡದಿ-ಮಕ್ಕಳ
ಸ್ನೇಹ
ದಿಗ್ಹ್ಬ್ರಮೆ
ಪರಿವೆಗೆ ಬರದಿದ್ದುದು
ಬದುಕಿನ ವಿಪರ್ಯಾಸ ... !!!

ಪ್ರತಿದಿನವೂ ಹೊಸ ವರುಷ ...

ಖುಷಿಯಲಿರುವ 
ಗೆಳೆಯನಲಿ 
ಕೇಳಿದೆ .. 
ಹೊಸ ವರುಷ 
ಹ್ಯಾಂಗೆ ಆಚರಿಸಿದೆ ...??

ಪುಟ್ಟ ಜೇಬಿನೋಳಗಿಂದ
ಅರ್ಧ ಖಾಲಿಯಾದ
ಬಾಟಲಿಯ ಮುದ್ದಿಸಿ
ಅಂದ ...

ಇವನು ಜೊತೆಯಿದ್ದರೆ
ನನಗೆ
ಪ್ರತಿದಿನವೂ
ಹೊಸ ವರುಷ ... 

ಅವನೊಬ್ಬ ಜಾತ್ಯಾತೀತ ...

ಅವನೊಬ್ಬ 
ಜಾತ್ಯಾತೀತ 
ವಿಶಾಲ ಹೃದಯಿ ... 
ವರುಷದಲಿ 
ಹಲವು 
ಹೊಸ ವರುಷಗಳನು
ಆಚರಿಸುವ ಭಾಗ್ಯ ...

ಕ್ರಿಸ್ತ ವರುಷ
ಯುಗಾದಿ
ಮೊಹರಮ್
ಎಲ್ಲವೂ
ಹೊಸ ವರುಷ ...

ಮನ ತೆರೆದು ಮಾತಾಡಿ
ನಕ್ಕು ನಲಿದು
ತನ್ನವರೊಂದಿಗೆ ಸೇರಿ
ಸಂತಸ ಪಡಲೊಂದು
ನೆಪ ಬೇಕು ...
ಅಷ್ಟೇ ... 

ಅನಿಸಿಕೆ ....


ಅಂದು 
ಓಲೆಕಾರ 
ಹೊತ್ತು ತರುತಿದ್ದ 
ಹೊಸ ವರುಷದ
ಸಂದೇಶದ ಪತ್ರದೊಂದಿಗೆ
ಬರುತಿದ್ದ
ಸಂತಸ ..
ಸಂಬ್ರಮ ..
ಉಲ್ಲಾಸ ....
ಇಂದೂ ಹಸಿರಾಗಿರಲು

ಇಂದಿನ
ಫೇಸ್ ಬುಕ್ - ವ್ಹಾಟ್ಸ್ ಅಪ್
ಮೊಬೈಲುಗಳ ಆಧುನಿಕ ಸಂದೇಶಗಳು
...............
ಬರಿ ಶೂನ್ಯ ... !!!

ಆತನೊಬ್ಬ ಸಂತ ...

ಆತನೊಬ್ಬ 
ಸಂತ ... 
ಸೋರುವ ಗುಡಿಸಲಲಿ 
ಮಡದಿ ಮಕ್ಕಳನು 
ಬಿಟ್ಟು ಎಲ್ಲೋ ಹೋಗಿದ್ದ 
ಕಾಣದ ದೇವರ ಹುಡುಕುತ ...

ಗುಡಿಸಲ ಪಕ್ಕ ಮದ್ಯದಂಗಡಿ ..
ತುತ್ತಿಗೂ ಗತಿಯಿಲ್ಲದ
ಸಂತನ ಅನಾಥ
ಕುಟುಂಬಕ್ಕೆ
ಹಬ್ಬ - ಜಾತ್ರೆ- ಹೊಸ ವರುಷ-
ನೀಡುತ್ತಿತ್ತು
ಹರುಷ ....

ಕುಡಿದು ಬಿಸಾಕಿದ
ಖಾಲಿ ಬಾಟಲಿಗೆ
ಮಡದಿ ಮಕ್ಕಳು
ದಿನ ಬೆಳಗಾಗುವ ವರೆಗೆ
ಹುಡುಕಾಟ ...

ರಾತ್ರಿಯ ಶೋಕಿಗೆ
ಖಾಲಿಯಾದ ಬಾಟಲಿ
ಪಕ್ಕದ ಗುಡಿಸಲಿಲಿ
ಹಸಿದ ಉದರಗಳಿಗೆ
ಕರುಣಿಸುತಿತ್ತು
ಯಾರಿಗೂ ಅರಿಯದೆ
ಅನ್ನ ದಾನ .... !!!

2013 to 2014.....



ವಿದಾಯ ಹೇಳ 
ಹೊರಟಿರುವ 
ನಿನ್ನೆಯನು 
ಇಣುಕಿ ನೋಡಿದೆ ...
ನೆನಪಿನ
ಸಾಗರದೊಳವಿತು
ಸ್ನೇಹ-ದುಃಖ
ಸರಸ-ವಿರಸ
ಏಳು ಬೀಳುಗಳು
ಜೊತೆಗೂಡಿ
ಕಣ್ಣೀರು ಸುರಿಸುತ
ಮಹಾ ಕಾವ್ಯ
ಬರೆಯುತಲಿವೆ .. !!!

ಅನುದಿನವು ನಿನ್ನ ನೆನಪುಗಳೆನ್ನ ...

ಅನುದಿನವು 
ನಿನ್ನ 
ನೆನಪುಗಳೆನ್ನ 
ಹೃದಯದೊಳ ಹೊಕ್ಕು 
ಕೀವು ತುಂಬಿದ 
ಗಾಯವನು
ಇನ್ನಷ್ಟು
ಕೊರೆಯುತಿದೆ ...
ನೆನಪೇ
ನೀನೆಂದು
ವಾರಕನಾಗಿ
ಬರುವೆ
ನನ್ನೆದೆಯ
ಗಾಯವಾರಿಸಲು ... ??

'ಪ್ರಣಯದ ಕನಸು ... '

ಆಗಸದೆತ್ತರಕೆ 
ಹಾರಿ
ಅಹಂ ನಿಂದ 
ಬೀಗುವ ಸಮಯದಲಿ 
ದಾರ ಕಡಿದು 
ನೆಲ ಕಚ್ಚಿದ
ಗಾಳಿಪಟ ....
ಈ ನನ್ನ
'ಪ್ರಣಯದ ಕನಸು ... '

ಇನ್ನೊಂದು ಹೊಸವರುಷ ...

ಹೊಸ್ತಿಲಲಿ
ಕಾಯುತಿದೆ 
ಇನ್ನೊಂದು ಹೊಸವರುಷ ... 
ಅಲ್ಪಾಯುಷಿ 
ಹುಚ್ಚು ಶಪಥಗಳಿಗೂ 
ಬರಲಿದೆ ಪುನರ್ಜನ್ಮ ....

ಜನವರಿ -- ೧
ನಾಳೆಯಿಂದ
ನಾ
ಸಿಗರೇಟು ಮುಟ್ಟಲಾರೆ ...
ಇನ್ನು ಕೆಲವರು
ಮಧ್ಯ ಮಾಂಸ...
ಇನ್ನು ಕೆಲವರ
ಮನದಲಿ ಹೊಸ ಆಯೋಜನೆಗಳು ...
ಪೊಳ್ಳು ಶಪಥಗಳು ...
ಒಂದು - ಎರಡು - ಮೂರು ..
ನಾಲ್ಕನೇ ದಿನಕ್ಕೆ ..
ಹೊಸವರುಷವೇ
ಕಳೆದು ಹೋಗುವುದು ...
ಜೊತೆಗೆ
ತಾ
ಮಾಡಿದ ಶಪಥಗಳೂ ...
ಶುನಕದ ಬಾಲ ...
ನಳಿಕೆಯೊಳಿಟ್ಟರೆ ....
................. 

ಜಗದ ಜೀವಿಗಳಲಿ ನಗುವಿರುವುದು ...

ಜಗದ ಜೀವಿಗಳಲಿ 
ನಗುವಿರುವುದು 
ಮನುಜ ಮೊಗದಲಿ ..
ಪ್ರಣಯವೇ 
ನೀ ನನ್ನ ಮೊಗದಲಿ 
ನಗುವ ಮೂಡಿಸಿದೆ ..
ಚಿರಂಜೀವಿಯಾಗಿರಿಸದೆ
ನೀ
ನನ್ನ ನಗುವನೇ
ಕಸಿದುಕೊಂಡೆ ...

ಇಂದು ನಾ ನಗುವೆನು ...
ಅಲ್ಲ
ನಕ್ಕಂತೆ ನಟಿಸುವೆನು...
ಕನಸಿಲ್ಲದ
ಬಂಜೆ ಮನದ ತೋಟದಲಿ
ಹೂವು ಅರಳುವುದೇ
ಅರಳಿದರೂ
ಸುಗಂಧ ವಿರಬಹುದೇ ..??

ಸುಖದ ನಟನೆ ...

ಹೊರಪದರದಲಿ 
ಕಾಣುತಿದೆ ... 
ಹಸಿರು ಉಸಿರು .. 
ನಗು ಮೊಗ 
ಸುಖದ ನಟನೆ ... 

ಒಳಗೊಳಗೇ
ಕನಸುಗಳಿಲ್ಲದೆ
ನೊಂದು ಒಣಗಿ
ಬತ್ತಿರುವ
ಬರಡು ಹೃದಯ
ಕಾಣುವರಾರಿಹರು

ಶಿವನಲ್ಲದೆ ..???

ಅಮ್ಮಾ ... ನಾ ನಿನ್ನ ನೋಡಿದೆ ನಿನ್ನೆಯ ಕನಸಿನಲ್ಲಿ ....

ಅಮ್ಮಾ ... 
ನಾ ನಿನ್ನ ನೋಡಿದೆ 
ನಿನ್ನೆಯ ಕನಸಿನಲ್ಲಿ ... 
ಜನಜಂಗುಳಿ .. 
ಜಾತ್ರೆಯಿರಬೇಕು ... 
ನನ್ನೆದುರ ಸಾಲಲ್ಲಿ
ನಿಂತು ಯಾರಲ್ಲೋ
ಏನೇನೂ ಹೇಳುವಂತಹ
ದೃಶ್ಯ ....
ಹಿಂದಿನಿಂದ ನಾ ಬಂದು
ಅಮ್ಮಾ ... ಅಮ್ಮಾ
ಎಂದು ಕೂಗಿ
ಕರೆದಿದ್ದೆ ...
ನೀ ಕೇಳಿಸಲಿಲ್ಲ ...
ನೀ ಮುಂದೆ -ಮುಂದೆ
ವೇಗವಾಗಿ ನಡೆಯುತಿರಲು
ನಾ ಹಿಂದಿನಿಂದ ....
ನಿನ್ನ ಹೆಜ್ಜೆಯನು ಹಿಂಬಾಲಿಸಿ ..
ಕೊನೆಗೆ ಎಲ್ಲವೂ
ಅಗೋಚರ ..
ಅಸ್ಪಷ್ಟ ....
ಮಾತಿಲ್ಲ ..

ಅಮ್ಮಾ ...
ಇಂದು ದಿನವಿಡೀ
ನಿನ್ನ ನೆನಪಿಸಿ
ಮೌನದಲ್ಲಿದ್ದೆ ..... !!!

(ಇದು ನಿನ್ನೆ ರಾತ್ರಿ ನಾ ಕಂಡ ಕನಸಿನ ವಿವರಣೆ ... ಕಲ್ಪನೆಯಲ್ಲ )

ಜಗದೊಡೆಯಾ ...

ಜಗದೊಡೆಯಾ .. 
ಹಲವು ದಿನಗಳಿಂದ 
ಕಾಡುತಿದೆ - 'ಸಂಶಯ' 
ಉತ್ತರವಿಲ್ಲದೆ- 
ಉತ್ತರವನರಿಯದೆ ... 
ಕೊರಗುತಿರುವೆ ..

ಅಲ್ಲಿ ..
ನೀನಂದ
ವೇದಗ್ರಂಥ ಗಳಲಿ
ಉಲ್ಲೇಖಿಸಿದ
ಸ್ವರ್ಗ - ಸ್ವರ್ಗ ಸುಖ
ರಂಭೆ -ಊರ್ವಶಿ-ಮೇನಕೆ
ಸುರಪಾನ ...
ಎಲ್ಲಾ ಇರುವುದಂತೆ ... !!!

ಏನಿದ್ದರೂ
ತಾಯ ಮಡಿಲಲಿ ತಲೆಯಿಟ್ಟು
ಮಲಗಿರಲು - ಆ ಸ್ನೇಹ ಮಾತೆ
ತಲೆಗೂದಲಲಿ ಕೈಯಾಡಿಸಿ - ನೇವರಿಸುತಿರಲು
ಸಿಗುವ ಸುಖ -ಸಂತೋಷ -ನೆಮ್ಮದಿ
ನೀನಂದ
ಅಲ್ಲಿ ಆ ಸ್ವರ್ಗದಲ್ಲಿ ಸಿಗಬಹುದೇ ...???

ವರುಷಗಳುರುಳಿವೆ ...

ವರುಷಗಳುರುಳಿವೆ 
ಹರೆಯದ ಮುಪ್ಪು 
ನೆನಪಿಸುತಿಲ್ಲ 
ನಿನ್ನ ನಗುಮೊಗವ .. 
ಆದರೂ 
ಗರಿಬಿಚ್ಚಿ ನಲಿಯುತಿದೆ ...
ಕೆಲವೊಮ್ಮೆ
ಚುಚ್ಚಿ ನೋಯಿಸುತಿದೆ
ಅಂದಿನ ದಿನಗಳ
ಕೆಲವೊಂದು ನಿಮಿಷಗಳು -
ಅಲ್ಲ
ನಿಮಿಷಗಳ ನೆನಪುಗಳು ...
ಆಡಿದ ಕೆಲವೊಂದು
ಸಿಹಿ ಮಾತುಗಳು ..

ಮುಖವಾಡವೇಕೆ ..???

ಹೃದಯದಾ 
ನೋವ ಮರೆಯಲು 
ಮರೆತಂತೆ ನಟಿಸಲು .. 
ಕೃತಕ ನಗು 
ನಗುತಿರಲು 
ಹೃದಯ ಕೇಳಿತು ..
ನನ್ನ ನೋವ
ತಣಿಸಲು
ವಂಚನೆಯ
ಮುಖವಾಡವೇಕೆ ..???

'ಕೊಟ್ಟದ್ದು ತನಗೆ ...'

ಮುಂದುವರಿಯುತ್ತಿತ್ತು 
ಗುರುಗಳ ಪಾಠ ... 
ಸರ್ವಜ್ಞನ ವಚನಗಳು . 
'ಕೊಟ್ಟದ್ದು ತನಗೆ ...'

ನಕ್ಕ ಶಿಷ್ಯನೊಡನೆ
ಗುರುವಿನ
ಪ್ರಶ್ನೆ...
ವಿವರಿಸಲು ...

ತಾ ಕೊಟ್ಟರೆ
ಲೈಕು ...
ಮರುದಿನ
ನಮ್ಮ
ಫೋಟೋಗಳಿಗೂ
ಲೈಕು ...

ಈಗ
ಶಿಷ್ಯನ ಸರಧಿ ....
ವಿಸ್ತರಿಸಿ ಹೇಳಲು ... ..

'ಫೇಸ್ ಬುಕ್' ಖಾತೆಯಿಲ್ಲ
ಪಾಪ
ಗುರುಗಳಿಗೆ . ... !!!

ನನ್ನ ಬರಹಗಳಲಿ ...

ನನ್ನ ಬರಹಗಳಲಿ 
ರಾಜಕೀಯವಿಲ್ಲ ... 
ಜಾತಿ-ಮತ ನಿಂದನೆಯಿಲ್ಲ 
ಒಳಾರ್ಥವಿಲ್ಲ .. 
ದೈವನಿಂದನೆಯಿಲ್ಲ .. 
ಇನ್ನೊಬ್ಬನ ಮನಸ
ನೊಯಿಸುವ ಅಕ್ಷರಗಳಿಲ್ಲ
ಅದಕೇ ...
ಜನರು ನನ್ನ
ಬರಹವ
ಮೆಚ್ಚುವುದಿಲ್ಲ ... 

ಇರುವುದು ...
ಪ್ರೀತಿ
ಸ್ನೇಹ ..
ವಿರಹ ...
ಸಮಾನತೆ
ಜಗದ ನಿಯಮಗಳು
ಮತ್ತು
ನನ್ನ ನೋವುಗಳು ...
ಅದಕೇ ...
ನನ್ನ ಬರಹವ
ಇಷ್ಟಪಡುವವನು
ಒಬ್ಬನೇ ಒಬ್ಬ ..
...
ಅವನೇ
ನನ್ನೊಳಗಿನ ..
ನಾನು ... 

ಹಲವು ರೂಪವ ಕೊಟ್ಟು ಹಲವು ನಾಮದಿ ಕೂಗಿ ...

ಹಲವು ರೂಪವ ಕೊಟ್ಟು 
ಹಲವು ನಾಮದಿ ಕೂಗಿ 
ದ್ವೇಷದ ಬೀಜವ ಬಿತ್ತಿ 
ಕಚ್ಚಾಡುತ 
ತನ್ನ ನಂಬಿಕೆಯ 
ಸಮರ್ಥಿಸುವ
ಜಗದ ಜನರ ಕಂಡು
ಮರುಕ ...
ತಾ
ಸೃಷ್ಟಿಸಿದ
ಮನುಜನ
ಹೃದಯದಿ
ಮಾನವೀಯತೆಯ
ತುಂಬಲು
ಮರೆತಿರುವೆನೋ ಎನ್ನುವ
ಗೊಂದಲ
ಆ ಜಗದೊಡೆಯನಿಗೆ ... !!!

ಮೋಕೆಯ ಮುತ್ತಿನಹಾರದಲಿ ...

ಮೋಕೆಯ ಮುತ್ತಿನಹಾರದಲಿ 
ಪೋಣಿಸಿದ 
ಸವಿನೆನಪುಗಳ ಮಣಿಗಳು 
ಉದುರಿ ಹೋಗಿಹುದು .. 
ತಡಕಿದರೂ ಸಿಗುತ್ತಿಲ್ಲ ..

ಮನವ ತಣಿಸಿ
ಹೃದಯವ ಬೆಳಗಲು
ದೀಪವಿಲ್ಲ ..
ನೆನಪುಗಳು ಕೊಡುವುದು
ಬರಿ ಬಿಸಿಯ ತಾಪ ..

ನೆನಪಿನ ತೂಣಿಯಲಿ ತುಂಬಿದ್ದ
ಬಾಣಗಳು ತನ್ನ ಬೆನ್ನಿಗೆ
ಜೊತೆಗೆ
ತನ್ನೆದೆಗೆ ಚುಚ್ಹುತಿದೆ
ವಿರಹದ ನೋವುಗಳಾಗಿ ...

(ತೂಣಿ = ಬತ್ತಳಿಕೆ )

***ನನ್ನಜ್ಜಿ ಮತ್ತು ಕ್ರಿಸ್ತ್ಮಸ್ ***

ನನ್ನಜ್ಜಿಮನೆಯ 
ಎದುರು ಮನೆಯೊಡೆಯ 
ಜಾನ್ ಡಿಸೋಜಾ 
ಕ್ರಿಸ್ಮಸಿಗೆ ತಂದಿದ್ದರು
ತುಂಡರಿಸಿದ ಕೋಳಿ ಮಾಂಸ . ...

ಸಂಪ್ರದಾಯಸ್ತೆ ಅಜ್ಜಿಯ
ಮನದಲಿ ಗೊಂದಲ ..
ಪ್ರೀತಿಯ ಕಾಣಿಕೆ ..
ಹಲಾಲ್ ಮಾಡಿರಬಹುದೋ ..
ಬೇಡ ವೆನ್ನುವುದಾದರೂ
ಹೇಗೆ ...

ಸೋಜರ ಒತ್ತಾಯ ..
ಅಜ್ಜಿ ತಗೊಳ್ಳಿ ..
ಧರ್ಮ ಗುರುಗಳು
ಕೊಯ್ದದ್ದು
ಚಿಂತಿಸದಿರಿ ...

ಆ ಮಾತ ಕೇಳಿ ನಂಬಿ
ನಾನು ನಮ್ಮಜ್ಜಿ
ಅಂದೇ ದಿನ ರಾತ್ರಿ
ಮಾಡಿ ತಿಂದೆವು
ತಿಂದು ಮುಗಿಸಿದೆವು ..
ಚಿಕ್ಕನ್ ಚಿಲ್ಲಿ ...

ಮರುದಿನ ಎದುರು ಮನೆಯಲಿ
ಜನ ಜಂಗುಳಿ .
ಬಿಳಿತೋಪಿನ ಗಡ್ಡಧಾರಿ
ಎನೇನೊ ಮಂತ್ರ ಪಠನ
ಕಯ್ಯಲಿ ಜಪಮಾಲೆ
ಕೊರಳಲಿ ತೂಗುತಿರುವ
ಚಿಕ್ಕ ಶಿಲುಬೆ

ನಾನು ನನ್ನಜ್ಜಿಯೂ
ಕಿಟುಕಿಯಿಂದ
ಇಣುಕು ನೋಟ ...
ಅತ್ತ ಕಡೆಯಿಂದ ಸೋಜರ ಕರೆ
ಬನ್ನಿ ... ಅಜ್ಜೀ ....
ಇವರೇ ನಮ್ಮ ಧರ್ಮಗುರು ...
ನಿನ್ನೆಯ ಕೋಳಿಯನು
ಹಲಾಲ್ ಮಾಡಿದ
ಧರ್ಮಗುರುಗಳು ...

ನನ್ನಜ್ಜಿಯ ಮುಖದಲ್ಲಿ ಆತಂಕ ...
ಮೌನದಲಿ ಮಾತು ..
ದೇವ ನಾಮ ..
ಅಸ್ತಗಫಿರುಲ್ಲ್ಲಾಹ್ಹ್ ...

(ಹಲಾಲ್= ಇಸ್ಲಾಂ ನಿಯಮವನುಸಾರವಾಗಿ/ದೈವನಾಮ ಹೇಳಿ ಕತ್ತರಿಸಿದ್ದು
ಸೋಜರು = ಕ್ರೈಸ್ತರು - (ಊರ ಭಾಷೆ )
ಅಸ್ತಗಫಿರುಲ್ಲ್ಲಾಹ್ಹ್ = ತಪ್ಪು ಮಾಡಿದ್ದಕ್ಕೆ ಪ್ರಾಯಶ್ಚಿತ ಮಾಡುವಾಗ ಉಪಯೋಗಿಸುವ ಪದ)

ವರುಷಗಳಿಂದ ಬೆಳೆದು ನಿಂತಿರುವ ಮಾಮರ...

ವರುಷಗಳಿಂದ 
ಬೆಳೆದು ನಿಂತಿರುವ 
ಮಾಮರದಿ 
ಹೂವಿಲ್ಲ-ಕಾಯಿಲ್ಲ್ಲ
ಚಿಗುರೂ ಇಲ್ಲ .. 
ಕೊಡಲಿಯ ರುಚಿ
ತೋರಿಸಲು
ಮನಸು ಬಾರದಿರಲು
ಮಲ್ಲಿಗೆ ಬಳ್ಳಿಯ ನೆಟ್ಟು
ಮರವ ಏರಬಿಟ್ಟೆ ..

ತನ್ನ ದೇಹವ
ಬಿಗಿದಪ್ಪಿ ಬಳ್ಳಿಯು
ಮೇಲೇರುತಿರಲು
ಪ್ರೀತಿ ಉದಯಿಸಿತು ...
ಗೊಡ್ಡು ಮರವೂ
ಅನುಭವಿಸಿತು ಕಚಗುಳಿ ...
ಬಂದಿತು ಹೊಸ ಹುರುಪು ...

ಮಲ್ಲಿಗೆ ಹೂ ಅರಳಿತು
ಜೊತೆಗೆ
ಮಾವೂ ಚಿಗುರಿತು ...
ಹೂವ ಬಿಟ್ಟು
ನಗುತ ನಿಂತಿತು ....

ಗೊಡ್ಡು ಮರಕೆ
ಪ್ರೀತಿಯ ಸ್ಪರ್ಶ ..
ಹೊಸ ಹುರುಪು
ಪ್ರೀತಿಯ ಅನುಭವ ...
ಬಳ್ಳಿಯ ಬಿಗಿ
ಅಪ್ಪುಗೆಯಿಂದ ... !!!

ಹೃದಯವೇ ನನಗರಿವಿದೆ ..

ಹೃದಯವೇ 
ನನಗರಿವಿದೆ .. 
ನಾ
ಕನಸ ಕಾಣುವುದ
ನಿಲ್ಲಿಸಿದೊಡನೇ 
ನೀ
ಹೊಡೆದೋಡಿಸುವಿ
ನನ್ನನು
ಮಸಣದಲಿ
ಮಲಗಿ
ಆರಿಗೂ
ಕೇಳಿಸದೆ
ಗೊರಕೆ ಹೊಡೆಯಲು ... !!!

ನನ್ನಮ್ಮ ..

ನನ್ನಮ್ಮ 
ಉಸಿರಾಡದೆ ಮಲಗಿರುವ 
ಹೊತ್ತಿನಲ್ಲಿ 
ಪಕ್ಕದಲಿ 
ಭಕ್ತಿಯಲಿ ದೈವ ನಾಮ 
ಜಪಿಸುತಿದ್ದ
ಜನಗಳನು ಕಂಡಾಗ ...
ಏನೋ
ದುಃಖ ಮಿಶ್ರಿತ ಭಯ
ಜೊತೆಗೆ ಧ್ವೇಶ....

ಬಿಗಿಯಾಗಿ ಅಪ್ಪುತಿದ್ದ
ಅಮ್ಮನ ನೆನಪಿನೊಂದಿಗೆ
ಸಡಿಳವಾಗುತಿದ್ದುದು
ಜೀವನೋತ್ಸಾಹವಲ್ಲ ..
ಸಾವಿನ ಭಯವೂ ಅಲ್ಲ ..

ತಿಂಗಳಿಂದ ಪ್ರಾಣ ಉಳಿಸಲು
ಕಾಡಿ-ಕೊರಗಿ ಪ್ರಾರ್ಥಿಸಿದರೂ
ಪ್ರಾರ್ಥನೆಗೆ ಬೆಲೆಕೊಡದವ .....
ಜಗದೀಶ್ವರನೆಂದು ಹೊಗಳಿ
ಅಟ್ಟಕೇರಿಸುತಿದ್ದೆವಲ್ಲವೇ ...
ಅವನ ಮೇಲಿನ ಇಟ್ಟಿದ್ದ
'ನಂಬಿಕೆ ... .. '

ಬೇಸಗೆಯ ಆ ಮುಸ್ಸಂಜೆಯಲಿ ...

ಬೇಸಗೆಯ
ಆ 
ಮುಸ್ಸಂಜೆಯಲಿ 
ನೀ ನನ್ನ 
ಹೃದಯಕ್ಕೆ 
ಚುಚ್ಹಿ ಹೋದಾಗ
ಹೊರಗೆ
ಧಾರಾಕಾರ
ಸುರಿದ
ನೀರು
ಮಳೆಯಾಗಿರಲಿಲ್ಲ ...

ನನ್ನ ಹೃದಯವು
ಅನುಭವಿಸುವ
ನೋವ ಕಂಡು
ಮರುಗಿ
ವರುಣನು
ಸುರಿಸಿದ
ಕಣ್ಣೀರು ... !!!