Saturday, 30 November 2013

ಮೊದಲ ತಪ್ಪು ...

ನನ್ನ 
ಕನಸುಗಳ 
ಬೀಜವನು 
ನಿನ್ನ 
ಹೃದಯದಲಿ  
ಬಿತ್ತಿದ್ದು ... 
ನಾ 
ಮಾಡಿದ 
ಮೊದಲ 
ತಪ್ಪು ... !!!

ತೆಪ್ಪಗಿದ್ದರೂ ಬಿಡದು ಈ ಕವನದ ಹುಚ್ಚು ...

ತೆಪ್ಪಗಿದ್ದರೂ  
ಬಿಡದು 
ಈ  
ಕವನದ ಹುಚ್ಚು ... 
ನುಚ್ಚು ನೂರಾದ- 
ಬೇಸತ್ತು 
ಸತ್ತ 
ಕನಸುಗಳಿಗೆ 
ಜೀವ ಕೊಟ್ಟು 
ಮಗದೊಮ್ಮೆ 
ನಸು ನಗುತಲಿದೆ ... 
ನೆನಪುಗಳ 
ದೀಪವ ಹಚ್ಚಿ ... 

Tuesday, 26 November 2013

ನನ್ನವ್ವ....

ಒಂಭತ್ತು 
ತಿಂಗಳು ಒಡಲಲಿರಿಸಿ 
ಹೆತ್ತು 
ತುತ್ತು ಕೊಟ್ಟು 
ಮುದ್ದಿಸಿ 
ಬೆಳೆಸಿದ 
ನನ್ನವ್ವ 
ಇಹವ ತೊರೆದು 
ಆಯ್ತು 
ತಿಂಗಳು 
ಒಂಭತ್ತು ... 

ನನಗಿನ್ನೂ 
ಬಂದಿಲ್ಲ ... 
ಚಿತ್ತಸ್ವಾಸ್ಥ್ಯ 

ದಿನವೂ  ಹೊತ್ತು 
ಅತ್ತು .. ಅತ್ತು ...
ಕಳೆದರೂ 
ಬತ್ತಿಲ್ಲ 
ಕಣ್ಣೀರ ಕಡಲು ...!!!


(ಚಿತ್ತಸ್ವಾಸ್ಥ್ಯ =ಮನಶ್ಯಾಂತಿ
ಹೊತ್ತು ಎಂಬ ಪದಕ್ಕೆ - ಅತೀವ ದುಃಖದಿ ಎಂಬ ಅರ್ಥವೂ ಇದೆ )

Monday, 25 November 2013

ನನ್ನ ಬರಹಗಳೆಂದರೆ ...

ನನ್ನ ಬರಹಗಳೆಂದರೆ ... 
ನನ್ನ ನೋವುಗಳು ... 

ಹೃದಯವೂ ತಳ್ಳುವುದು ನೋವನು ಹೊರಗೆ ...

ನವಮಾಸ 
ತುಂಬಿದೊಡೆ 
ತನ್ನ  ಕೂಸನು 
ಒಡಲು 
ಹೊರದಬ್ಬಿಸುವಂತೆ 
ಮನದ 
ನೋವಿನ 
ತಾಮಸದ 
ಅವಧಿ 
ಅಧಿಕವಾದೊಡೆ 
ಹೃದಯವೂ 
ತಳ್ಳುವುದು 
ನೋವನು 
ಹೊರಗೆ ... 
.............
ಕಣ್ನೀರ
ಕೋಡಿಯ 
ಹರಿಸಿ ..



ನೋವೊಂದು ಮನದೊಳಗೆ ಮನೆಮಾಡಿ ....

ನೋವೊಂದು 
ಮನದೊಳಗೆ 
ಮನೆಮಾಡಿ
ಕೊರೆಯುತಿದೆ 
ಹೃದಯವ ...

ಸಂತಸದಿರಲು 
ಜೊತೆಗಿರ್ದರು 
ಮನುಜರು 
ನೂರು ನೂರು ... 

ನೋವಿನ 
ಒಂದಿಷ್ಟು ಪಾಲು 
ಕೇಳಿ ಪಡೆಯಲು  ಸನಿಹ 
ಬರುವರೆಂದಿದ್ದೆ .. 

ಅನಿಸಿಕೆ 
ಸುಳ್ಳಾಯಿತು ..
.................. 
ನೆರಳನೂ  ನಾ 
ಕಾಣೆನಿಲ್ಲಿ ... !!!


Saturday, 23 November 2013

ಮನದ ನಗು ....

ಮನದೊಳಗೆ 
ವಿರಹವು 
ನಾಟ್ಯವಾಡುತಲಿರಲು 
ಮನವೆಂತು 
ಅನುಮತಿ 
ನೀಡುವುದು 
ತುಟಿಗಳಿಗೆ 
ನಗಲು ... 
ನಗುತಲಿರಲು ...??

ರವಿಗೆ ರಜೆಯಿಲ್ಲ ..

ಜಗದ 
ಮನುಜರು 
ರಜೆಯ 
ಮಜವ ಕಾಣುತಿಹರಿಂದು ... 
ಅನುದಿನವು 
ಜಗವ ಬೆಳಗುವ
ರವಿಗೆ
ರಜೆಯಿಲ್ಲ
ರವಿವಾರದಲೂ ...

Friday, 22 November 2013

ಮಳೆ- ಇಳೆ

ಮಳೆಕೊಟ್ಟ
ಪ್ರೀತಿಗೆ 
ಇಳೆಗೆ 
ಬಸಿರಾಯಿತು 
ದಿನ ಬೆಳಗಾಗಲು 
ಹಸಿರಾಯಿತು ... !!!

ನೀರು ಕುಡಿದು ಸಾಯುವಾಸೆಯಿದೆಯಂತೆ ಮುತ್ತಾತನಿಗೆ .....

ಮುತ್ತಾತ 
ದಿನವೂ ಕರ ಮುಗಿದು 
ಪ್ರಾರ್ಥಿಸುತಿರಲು 
ಪಕ್ಕದಲಿ 
ನಾ ಕೇಳಿಸುತಿದ್ದೆ 
ಒಂದೆರಡು ಗುನುಗುವ 
ಶಭ್ದಗಳು .. 
ಟೀವಿ -ಧಾರಾವಾಹಿ ..
ಉದ್ದೇಶವನರಿಯಲು  
ಉತ್ಸುಕುದಲಿ 
ಕೇಳಲು 
ಕೊನೆಗೂ 
ಹೇಳಿದರು 
ವಿವರವಾಗಿ ... 

'ಒಡೆಯಾ ... 
ಟೀವಿಯಲಿ 
ಧಾರವಾಹಿ 
ಸಂಪ್ರೇಕ್ಷಣೆಯ ಸಮಯದಲಿ 
ಕಳುಹಿಸದಿರು 
ಜವರಾಯನ ... 
ಪ್ರಾಣ ಪಕ್ಷಿ ಹಾರುವ ಸಮಯದಲಿ ..
ಮಕ್ಕಳು-ಮೊಮ್ಮಕ್ಕಳು 
ತಂದು ಕೊಡರು .. 
ಒಂದು ಲೋಟ ನೀರು 
ನಾ ಬೊಬ್ಬಿಟ್ಟರೂ .. '

ಅದ ಕೇಳಿ 
ನಾನೂ ಪ್ರಾರ್ಥಿಸತೊಡಗಿದೆ 
ನೆರವೇರಲೆಂದು 
ಅವರ ಅಭಿಲಾಷೆ ... . 

'ಜಾಹಿರಾತಿನ 
ಸಮಯವ ನೋಡಿ 
ನೀ 
ಕಳುಹಿಸು .. 
ಜವರಾಯನ ... 
ಕೊನೆಗಳಿಗೆಯಲಿ 
ನೀರು ಕುಡಿದು 
ಸಾಯುವಾಸೆಯಿದೆಯಂತೆ 
ಮುತ್ತಾತನಿಗೆ ..... '


Thursday, 21 November 2013

ಹಸಿರಾಗಿವೆ ಅಮ್ಮನ ನೆನಪುಗಳು ..

ಅಮ್ಮಾ . 
ನೀ ನೆಟ್ಟ 
ತೆಂಗು- ಬಾಳೆ 
ಮಾವು -ಪೇರಳೆ 
ಗಿಡ-ಮರಗಳ 
ಹಸಿರಲ್ಲಿ ... 
ಕಾಣುವೆವು 
ನಿನ್ನ ಮೊಗವನ್ನು 
ನಿನ್ನ ನಗುವನ್ನು ..

ದಿನವೂ 
ನೀರೆರೆಯುತಿರುವೆವು 
ನಾವಿಂದು...  

ಹಸಿರಾಗಿರುವುದು 
ನಿನ್ನ ನೆನಪುಗಳು
ಜೊತೆಗೆ 
ನೀನೆಟ್ಟ ಗಿಡ-ಮರಗಳು .. 

***ಮಧ್ಯ ಕಲಿಸುವ ಭಾಷೆ ***



ವಲಸೆ ಬಂದು 
ತಂಗಿರುವ 
ಪಕ್ಕದ್ಮನೆ ತಮಿಳಮ್ಮ
ಆಡುವ  ಭಾಷೆ 
ತಮಿಳು ... 

ತಮಿಳಮ್ಮನ ಮಕ್ಕಳು  
ಶಾಲೆಗೆ 
ಹೋಗಿ 
ಕಲಿವ ಭಾಷೆ 
ಕಸ್ತೂರಿ ಕನ್ನಡ .... 

ಅಕ್ಷರವೇ ಕಲಿಯದವ  
ಅವರಪ್ಪ ತಮಿಳಪ್ಪ  

ಕೂಲಿ ಕೆಲಸ ಮುಗಿಸಿ 
ಮುಸ್ಸಂಜೆಯಲಿ 
ವಾಲುತ  ಬಂದು 
ಮಡದಿ-ಮಕ್ಕಳನು  
ಬಯ್ಯುಲು 
ಬಳಸುವ 
ಭಾಷೆ ಮಾತ್ರ 
ಇಂಗ್ಲೀಷು ....!!! 

Wednesday, 20 November 2013

ಕನಸಲಿ ಕಾಡುವವಳು

ಇನ್ನೆಂದೂ ನಿನ್ನ 
ನೋಡಲಾರೆ
ಕಾಡಲಾರೆ 
ಮಾತನಾಡಲಾರೆ
ಎಂದೆಲ್ಲಾ
ನೆಲಮುಟ್ಟಿ ಶಪಥ ಮಾಡಿ
ಶಾಶ್ವತ ವಿದಾಯ ಹೇಳಿ
ಹೊರಟ
ಕಲ್ಲು ಹೃದಯದ ಒಡತಿಯೇ
ಮತ್ತಿನ್ಯಾಕೆ
ಪ್ರತಿ ರಾತ್ರಿ ಕನಸಲಿ ಬಂದು
ಕಾಡುತಿರುವಿ,,,,???

ನಿನೆಂದಾದರೂ ಬರುವಿ ..

ಗೆಳೆಯಾ 
ಭರವಸೆಗಳ 
ಹಿಡಿದ 
ಕೈಗಳನು 
ಸಡಿಲಿಸಲಾರೆ 
ಶಬರಿಯಂತೆ
ಕಾದಿರುವೆ....
ನಿನೆಂದಾದರೂ
ಬರುವಿ
ನನ್ನ
ಕಣ್ಣೆದುರಿಗೆ
ಶ್ರೀರಾಮನಂತೆ
ಹರಿವ
ಕಣ್ಣೀರನೊರೆಸಲು

ಧನ್ಯತೆ .

ಒಂದೊಂದು 
ಹನಿಗವನ, 
ಚುಟುಕು 
ನಿಮ್ಮತ್ತ ತಲುಪಿ 
ನೀವದನ 
ಮೆಚ್ಚಿ
ಪ್ರತಿಕರಿಸಲು .
ಒಂದೊಂದು
ಹನಿ,
ಗುಟುಕು
ಅಮೃತ ಸವಿದ
ಅನುಭವ ...
ಧನ್ಯತೆ .

ಪ್ರಿಯೇ .. ನನಗರಿವಿದೆ ..

ಪ್ರಿಯೇ ..
ನನಗರಿವಿದೆ .. 
ನೀನೊಂದು ವನಸುಮ .. 
ನನ್ನ ಮರೆತು ಯಾ 
ಮರೆತಂತೆ ನಟಿಸಿ 
ಕಾನನದಲ್ಲಿ
ನಗುತಿದ್ದರೂ
ಅಳುತಿದ್ದರೂ
ನಾ ಕಾಣುವೆನು
ನಿನ್ನ ನಗುವನು
ನಿನ್ನ ಅಳುವನು ...
ನೀನು 

ಭುವನ ಮೋಹಿನಿಯಾದರೆ 
ನಾನು...
ಭುವನನಯನ
ಎಲ್ಲಿದ್ದರೂ ನಿನ್ನ
ಇರುವು ಕಾಣುವೆನು .. .

(ಭುವನ ಮೋಹಿನಿ =ಜಗತ್ತನ್ನೇ ಮೋಹಗೊಳಿಸುವವಳು
ಭುವನನಯನ = ಸೂರ್ಯ

ನೀನಿರಬೇಕಿತ್ತು ...

ಪ್ರಿಯೇ 
ಅಂದು 
ನಿನ್ನ ಹೃದಯದಲಿ 
ಕಂಗಳಲಿ 
ಹರಿಯುತಿದ್ದ 
ಆ ಪ್ರೀತಿಯ
ಹೊಳೆಯ
ನೆನಪಿನ
ಅನುಭವವನ್ನು
ಇಂದು ನಾ
ಅಕ್ಷರಕೆ ಇಳಿಸಿ
'ಕವಿತೆ'ಯಾಗಿಸುವಾಗ
ನಾ
ಬಯಸುವೆ ..
ಓದಲು
ನೀನಿರಬೇಕಿತ್ತು ...

ಅದೇ ಕಿಟಿಕಿ

ಮದುವೆಯ ಮೊದಲು 
ಕಿಟಿಕಿಯಿಂದ 
ನೀ ನನ್ನ 
ಕದ್ದು ನೋಡುತಿರಲು 
ಆ ನೋಟಕ್ಕೆ 

ನಾನು ಅನುಭವಿಸುತಿದ್ದ

'ಪುಳಕ'ವ
ನಾನಿಂದೂ
ಅನುಭವಿಸುತ್ತಿರುವೆ ...

ಆ ನಿನ್ನ ಹಳೆ ಮನೆಗೆ
ಬಂದಿಹರು
ಹೊಸ ಬಾಡಿಗೆದಾರರು ..
ಅದೇ ಮನೆ
ಅದೇ ಕಿಟಿಕಿ
ನೋಡುವ
ಕಣ್ಣುಗಳು ಮಾತ್ರ
ಬೇರೆ .... 

ಅಪ್ಪ . ಅಮ್ಮ ...

ತನ್ನ ಮುದ್ದು ಕಂದನಾದರೂ 
ತಾನುಟ್ಟ ಬಟ್ಟೆಯನು 
ಒದ್ದೆ ಮಾಡಿದರೆ 
ರೇಗುವನು ...
ಮಡದಿಯನು ಕೂಗುವನು 
ಲೇ ..
ಇಲ್ಲಿ ಬಾ ...
ನಿನ್ನ ಮಗುವನೆತ್ತಿಕೋ ...
ಇವನು ಅಪ್ಪ ...

ಓಡಿಬಂದು ಕಂದನ ಎತ್ತಿ
ಪುಟ್ಟ ಪಾಪೂ ...
ಅಪ್ಪನಿಗೆ ಅಮೃತ ಕೊಟ್ಟೆಯಾ
ಎಂದು ನಕ್ಕು
ಮುದ್ದಿಸಿ
ಬಚ್ಚಲ ಕಡೆ
ಪ್ರೀತಿಯಿಂದ
ಒಯ್ಯುವವಳು
ಅಮ್ಮ ...

ನನ್ನ ಲೇಖನಿಯ 'ಇಂಧನ' ...

ಅಮ್ಮಾ ... 
ನಿನ್ನ ವಿರಹದ 
ನೋವಿನಿಂದ 
ಹರಿದ ಕಣ್ಣೀರೇ 
ನನ್ನ 
ಲೇಖನಿಯ 
'ಇಂಧನ' ...

ಹುಚ್ಚು ಮನಸ್ಸಿನ ತವಕ

ಅಮ್ಮಾ .... 
ಇಂದೆನೆಗೆ 
ಸಾವಿನ ಭಯವಿಲ್ಲ 
ಅಸ್ವಸ್ತನಾದೊಡೆ 
ನೋವಿಲ್ಲ ..
ಮನದೊಳಗೆ
ಸಂತಸದ ಕೊರತೆಯಿದ್ದರೂ
ಜೀವನದಲ್ಲಿ
ಜಿಗುಪ್ಸೆಯಿಲ್ಲ ..
ಇಹಲೋಕದಲಿ
ಆಸೆ ತೀರುವ ವರೆಗೆ
ಜೀವಿಸಿದೆ .. ಎಂದಲ್ಲ
ಅಮ್ಮಾ
ನಿನ್ನ ನೆನೆದೆನಗೆ
ಉಮ್ಮಳ
ನಾ ಶವವಾದೊಡೆ
ನೀ ನಡೆದ ಮನೆಯತ್ತ
ಹೊತ್ತಯ್ವರೆನ್ನ ...
ಅತ್ತಕಡೆ ನಿನ್ನ ಬಂದು ಕಾಣಲು
ಹುಚ್ಚು ಮನಸ್ಸಿನ
'ತವಕ

ತುಟಿ -ತುಟಿಗಳ ಮಿಲನ..........

ತುಟಿ -ತುಟಿಗಳ 
ಮಿಲನದ 
ವೇಳೆಯಲಿ 
ಮೌನವೂ 
ಆಡುವುದು 
ನೂರೆಂಟು
ಮಾತುಗಳು ..

ನಗುಮಾತು ಪಿಸುಮಾತು...

ಕನಸಿನಂತೆ 
ಬಂದಳು .. 
ಮನಸ 
ಕದ್ದಳು ... 
ನಗುಮಾತು 
ಪಿಸುಮಾತು..

ಹಗುರವಾಯ್ತು
ಮನಸು
ಹೃದಯ ...

ರೇಗಿಸಲೆಂದು
ತುಂಟಾಟ
ಮಾಡಿದೆ ...

ಹೊರಟೇ ಹೋದಳು
ಮರು ಮಾತನಾಡದೆ ...

ಸಾವಿರ ಮಾತಿನ
ಬೆಲೆಯನ್ನು
ಮುತ್ತಿನಂತೆ
ಜೋಪನವಾಗಿಟ್ಟರೂ
ಒಂದೇ ಒಂದು
ತುಂಟ ಮಾತು
ಮುಳುವಾಯ್ತು
ಪರಿಶುದ್ದ
ಗೆಳೆತನಕೆ ...

ಎಲುಬಿಲ್ಲದಾ ನಾಲಿಗೆಯೇ
ನೀನೇಕೆ ಹೀಗೆ ..???

ಹೊಸ ಬಾಳಿನ

ಹೊಸ ಬಾಳಿನ 
ಹೊಸ ಪ್ರೀತಿಯ 
ಹೊಸ ಕನಸ ಕಾಣುತಿರಲು 
ಎಂದೋ ಸತ್ತ 
ನಿನ್ನ ನೆನಪುಗಳು 
ಮತ್ತೆ ಚಿಗುರ ತೊಡಗುವುದು ...
ಮಗದೊಮ್ಮೆ
ಹೃದಯದ ಕದಕದಪು
ಹಿಂಡು ಹಿಚುಕಿ
ಹಿಪ್ಪೆ ಮಾಡುವುದು
ನನ್ನೀ
ತನು ಮನವ. ..
ಓ ನೆನಪೇ
ನೀನೇಕೆ
ಇನ್ನೂ ಕಾಡುತಿರುವೆ ...

(ಕದಕದಪು =ಕಂಪನ,ಅಲುಗಾಟ )

ನಿದ್ದೆಗಣ್ಣಲೂ ನಾ ಕಾಣುವೆ



ನಿದಿರಾ ದೇವಿಯು
ಕೈಬೀಸಿ ಕರೆಯುವ
ಈ ಹೊತ್ತಿನ
ನಿದ್ದೆಗಣ್ಣಲೂ
ನಾ ಕಾಣುವೆ 
ನನ್ನೆಡೆಗೆ ನೋಟವಿಟ್ಟು
ಬೇಟೆಯಾಡಲು
ಹಣಗುತಿರುವ
ನಿನ್ನ ನೆನಪುಗಳನ್ನು ...
ಗೌಳಿಯಂತೆ ...

(ಹಣಗು=ಮರೆಯಲ್ಲಿ ನಿಂತು ಹೊಂಚು ಹಾಕು
ಗೌಳಿ =ಹಲ್ಲಿ )

ಚಾಚಾಜೀ ,,,,





ಚಾಚಾಜೀ ನೀನು 
ಕವಿ,
ಬರಹಗಾರ ,
ಸ್ವಾತಂತ್ರ್ಯ

ಪ್ರಧಾನಿ ... 
ಏನೆಲ್ಲಾ ಆಗಿರಬಹುದು ...
ಆದರೆ
ನಾ ಮೆಚ್ಚಿದ್ದು
ನಿನ್ನ ಪ್ರಣಯ ಜೀವನ
ಮುದಿಪ್ರಾಯದಲ್ಲೂ ...
ನಿನ್ನಲ್ಲಿದ್ದ ರಸಿಕತೆ ..
ನಿನ್ನ ಮೇರು ವ್ಯಕ್ತಿತ್ವದ
ಒಳಗಡೆ ಅಡಗಿದ್ದ
ಪ್ರಣಯ...
ಎಡ್ವಿನಾ ಮೌಂಟ್ ಬೆಟನ್ ಳೊಂದಿಗೆ
ಹಂಚಿ
ಉಂಡು
ಮುಗಿಸಿದ
ಪ್ರೀತಿಯ ಭೋಜನ ..
ನಲ್ಮೆ ಯ ಜೀವನ

ಅಂತಿಮ ವಿದಾಯ ಹೇಳುವ ದಿನ ...



ಮುಂದೊಂದು ದಿನ
ಬರಬಹುದು...
ಅಂತಿಮ ವಿದಾಯ
ಹೇಳುವ ದಿನ ...
ಮಲಗಿರಲು 
ಕನಸುಗಳ ಸುಳಿವಿರದು
ಕೇಳಿಸಬಹುದೊಂದು
ಅಶರೀರವಾಣಿ ...
'ನಿಷ್ಪ್ರಪಂಚವಾಗಿರುವಿ...
ಸ್ತಬ್ದವಾಗಿದೆ ಈ ನಿನ್ನ
ಹೃದಯ ಕ್ರಿಯೆ..
ತೆರೆ ಎಳೆದಿರುವೆ
ನಿನ್ನ ಕನಸುಗಳಿಗೆ .. '

ಒಳಗಣ್ಣು ತೆರೆದಾಗ ...
ಕಾಣಬಹುದು - ಕೇಳಬಹುದು
.....
ಪುರುಷರ ನೀರವ ಮೌನ..
ಪಲುಂಬುವ
ಸ್ತ್ರೀ ಶಬ್ಧಗಳು ...

ಅಮ್ಮನ ಪ್ರಾರ್ಥನೆ ...

ತನ್ನ 
ಪತಿ ಮಕ್ಕಳ 
ಒಳಿತಿಗಾಗಿ
ದೀರ್ಘ ಆಯುಷ್ಯಕ್ಕಾಗಿ 
ದಿನವೂ 
ಭಗವಂತನಲ್ಲಿ
ಅತ್ತು ಬೇಡುತಲಿದ್ದಳು
ಹೆತ್ತಬ್ಬೆ ..
ಆದರೆ
ತಾನು
ಅತ್ತ ತೆರಳಳು
ಹೊರಟು ನಿಂತಾಗ
ವಯಸ್ಸು
ಕೇವಲ
ನಲುವತ್ತು ...

"ನೋವು ನಿವಾರಕ ಔಷಧಿಗಳಿಗೆ ಸಮೀಪಿಸಿ "



ಮಹಡಿಯ ಮೇಲಿರುವ
ಮನೆಯ
ದಂಪತಿಗಳ
ಜಗಳವ ದಿನವೂ
ಕಂಡು - ಕೇಳಿ 
ನೆಲಮಹಡಿಯ
ಅಕ್ಕ ಪಕ್ಕದ
ಇಬ್ಬರು ವ್ಯಾಪಾರಿಗಳು
ಜೊತೆ ಸೇರಿ
ಫಲಕ ಬರೆಯಿಸಿದರು ...
"ನೋವು ನಿವಾರಕ
ಔಷಧಿಗಳಿಗೆ ಸಮೀಪಿಸಿ "
ಒಬ್ಬನದು ಔಷಧಿ ಅಂಗಡಿ
ಇನ್ನೊಬ್ಬನದು
ಮಧ್ಯದಂಗಡಿ .

ನಿದಿರಾದೇವಿಯೇ ನೀ ಕಾಯುತಲಿರು ..

ನಿದಿರಾದೇವಿಯೇ 
ನೀ 
ಕಾಯುತಲಿರು .. 
ಮುತ್ತು ಕೊಟ್ಟ ತುಟಿಗಳ 
ನೆನಪುಗಳೆನ್ನ 

ಬಿಟ್ಟು ಹೋಗುವ
ತನಕ ... .. 

ಮಡದಿಯ ನುಡಿ

ಹೊಸ ಸೀರೆಯುಟ್ಟು 
ಮಲ್ಲಿಗೆ ಮುಡಿದು 
ಎದುರು ನಿಂತವಳು 
ಕೇಳಿದಳೆನ್ನ ... 
ರೀ 
ಹ್ಯಾಗಿದ್ದೇನೆ ..
ಚೆಂದ ಕಾಣ್ತೀನಾ ..
.
ನಾನೆಂದೆ
ಅಷ್ಟೇನೂ ಚೆನ್ನಾಗಿಲ್ಲ ...

ಹೊರಟು ನಿಂತು
ನುಡಿದಳು ...
'ಪಕ್ಕದ ಮನೆಗೆ
ಹೋಗ್ತೀನಿ
ನೀವು ಇಲ್ಲಿನ
ಕಿಟುಕಿಯಿಂದ
ಕದ್ದು ನೋಡಿ ...
ಆ ಮೇಲೆ
ಹೇಳಿ ... '

ನನಗೆ ಚಳಿಗಾಲ ಬಂದರೆ ಭಯ ....

ನನಗೆ 
ಚಳಿಗಾಲ ಬಂದರೆ 
ಭಯ .... 
ಅವಳ ನೆನಪುಗಳೆನ್ನ 
ಅಣಕಿಸಿ ಕೇಳುವುದು ... 
ಬೆಚ್ಚಗಾಗಲು
ಬೇಕೇ
ನನ್ನ
ಅಭಯ... ???

ಮಸಣದಲರಳಿದ ಸುಮಗಳು

ಮಸಣದಲಿ 
ದಫನಕ್ಕೆ 
ಅಣಿಯಾಗುವ ಶವವೊಂದು 
ಹೀಗೆನಬಹುದೇನೋ ... 
'ತೆಗೆದುಬಿಡಿ 
ನನ್ನ
ನಾಸಿಕ ರಂಧ್ರದಲಿ
ಮುಚ್ಚಿಟ್ಟ
ಹತ್ತಿ ...
ಕಾಣುತಿದೆ
ಕಣ್ಣೆದುರಿಗೆ
ಹೊತ್ತಿಸಿದ ಅಗರ ಬತ್ತಿ
ಮಸಣದಲರಳಿದ ಸುಮಗಳು
ನನಗೊಂದಿಷ್ಟು
ಸವಿಯ ಬಿಡಿ
ಪರಿಮಳವ ... '

ಮಾಮರದ ಕೋಗಿಲೆ

ಚಿಗುರಿದ 
ಮಾಮರದಲಿ ಕುಳಿತು 
ಕೂಗುವ 
ಯಾ ಹಾಡುವ 
ಕೋಗಿಲೆಯ 

ದನಿಯನು
ಸಂಭ್ರಮವೆಂದು
ಬಣ್ಣಿಸುವ
ಕವಿವಾಣಿಯು
ನಿಜವೆಂದು
ನಾ
ಒಪ್ಪುವುದಿಲ್ಲ ...
....................
ದನಿಯೊಳಗೆ
ವಿರಹವು
ತುಂಬಿರಲೂಬಹುದು ... 

ಇಮಾಂ ಸಾಬರೂ - ಪೂಜಾರಿಯೂ

ರವಿಯು ಬೆಳಕು ಚೆಲ್ಲುವ 
ಮೊದಲೇ 
ದೇವರನು ಧ್ಯಾನಿಸಲು 
ಕೂಗಿ ಕರೆಯುವ 
ಇಮಾಂ ಸಾಬರೂ 

ಗುಡಿಯ ಗಂಟೆ
ಬಾರಿಸುವ
ಪೂಜಾರಿಯೂ
ಬೆಳಗೆದ್ದು ಮೀಯುವುದು
ಒಂದೇ ಕೊಳದಲ್ಲಿ ...

ಅವರಿಬ್ಬರಲ್ಲಿದ್ದ
ಸ್ನೇಹ-ಪ್ರೀತಿ -ಗೌರವ
ಅನ್ಯೋನ್ಯತೆ ..
ಮಸೀದಿ - ಗುಡಿಯ
ಕಡೆ ತಪ್ಪಿಯೂ
ಕಾಲಿಡದ
ಊರ ಯುವಕರ
ಹೃದಯದಲ್ಲೂ
ಇದ್ದಿದ್ದರೆ ...
ವಿಷ ಬೀಜಗಳು
ಮೊಳಕೆಯೊಡೆಯುತ್ತಿರಲಿಲ್ಲ 

ವರದಕ್ಷಿಣೆ...

ವರದಕ್ಷಿಣೆಯ ಗಾವರ
ಹೆಣ್ಣು ಹೆತ್ತವರ 
ನಡುಗಿಸಲೆನಿತು 
ಬಂದೀತು 
ಕಣ್ಣೀರಿಗೆ ಬರ ... ???



(ಗಾವರ =ಅಬ್ಬರ )

ನನ್ನ ಕವನಗಳಲ್ಲಿ ......

ಗೆಳತೀ 
ನೀನಂದೇ 
ಸತ್ತು 
ಹೋಗಿರುವಿ ... 
ಇಂದು ನೀ 
ಜೀವಿಸುರುವುದು
ನನ್ನ
ಕವನಗಳಲ್ಲಿ
ಹೃದಯದಲ್ಲಲ್ಲ... !!!

ಗೆಳತೀ ಬಾಡುತಿದೆ ಹೃದಯ ..



ಗೆಳತೀ
ಬಾಡುತಿದೆ
ಹೃದಯ ..
ಒಂದಿಷ್ಟು
ಸಿಹಿಮಾತಿನಲಿ
ತಣ್ಣೀರನೆರಚಿ
ಹೋಗುವೆಯಾ ...

ಒಡೆದ ಪ್ರೀತಿ...

ಒಡೆದ 
ಪ್ರೀತಿಯ ನೆನಪ 
ಮರೆಯಲು 
ಹೆಂಡದ 
ಸಹವಾಸ 
ಮಾಡಿದ
ಆ ಭಗ್ನ ಪ್ರೇಮಿಯನು
ಕಂಡು
ನಗುತಿತ್ತು
ಇನ್ನೊಂದೆಡೆ
ಅದೇ ಪ್ರೀತಿ ...
..................
ಯಕ್ಷಿಯಂತೆ ...

ಗೆಳೆಯಾ ...

ಗೆಳೆಯಾ 
ನನ್ನ ಮೌನದ 
ಅರ್ಥವನರಿಯದ
ನೀನೆನಿತು 
ಓದುವಿ 
ನನ್ನ
ಮುಚ್ಚಿಟ್ಟ
ಹೃದಯದಿ ಬರೆದ
ಅಕ್ಷರಗಳನ್ನ ...???

ನಾ ನಿನ್ನ ಮೊಗವ ...

ಇರುಳ ಇಬ್ಬನಿಗೆ 
ಮಯ್ಯೊಡ್ಡಿ 
ರವಿ ಮೂಡಲು 
ಅರೆ ಮಿಂದು 
ಒಂದೆರಡು ಹನಿಯ 
ತನ್ನ ಎಸಳಿನಲಿರಿಸಿ
ಎಳೆಬಿಸಿಲಿನಲಿ
ಮಿಣ್ಣಗೆ ನಗುವ
ಗುಲಾಬಿ ಹೂವಿನಲಿ
ಕಾಣುವೆ
ನಾ
ನಿನ್ನ ಮೊಗವ ...

Wednesday, 13 November 2013

ಹೊಸ ಕನಸ ಕಾಣುತಿರಲು ..

ಹೊಸ ಬಾಳಿನ 
ಹೊಸ ಪ್ರೀತಿಯ 
ಹೊಸ ಕನಸ ಕಾಣುತಿರಲು 
ಎಂದೋ ಸತ್ತ 
ನಿನ್ನ ನೆನಪುಗಳು 
ಮತ್ತೆ ಚಿಗುರ ತೊಡಗುವುದು ...
ಮಗದೊಮ್ಮೆ
ಹೃದಯದ ಕದಕದಪು
ಹಿಂಡು ಹಿಚುಕಿ
ಹಿಪ್ಪೆ ಮಾಡುವುದು
ನನ್ನೀ
ತನು ಮನವ. ..
ಓ ನೆನಪೇ
ನೀನೇಕೆ
ಇನ್ನೂ ಕಾಡುತಿರುವೆ ...

(ಕದಕದಪು =ಕಂಪನ,ಅಲುಗಾಟ )

(ಹಳೆಯ ಕವನವೊಂದನ್ನು ಸ್ವಲ್ಪ ತಿದ್ದಿ ಬರೆದಿರುವುದು ... )

ರಾತ್ರಿ ಹಾಕಿದ ಬಲೆ



ರಾತ್ರಿ ಹಾಕಿದ ಬಲೆಯ
ಬೆಳಗೆದ್ದು
ನೋಡಿದರೆ
ಕಾಣವುದು
ಮೀನುಗಳು 
ರಾಶಿ ರಾಶಿ..

ರಾತ್ರಿ ಹಾಕಿದ
status, photo ಗಳ
ಬೆಳಗೆದ್ದು ನೋಡಿದರೆ
ಕಾಣುವುದು
ಲೈಕು ಗಳು
ಕಮೆಂಟುಗಳು
ರಾಶಿ ರಾಶಿ ....

ಮುರಿದ ಮನಸಿಗೆ ಕನಸಿಗೆ ತೇಪೆ ಹಚ್ಚುವವಳು ....

ಮೊದಲ ರಾತ್ರಿಯಲಿ 
ಹಾಲಿನೊಂದಿಗೆ 
ಬರುವ 
ನಗುಮುಖವ ಕಂಡು 
ಮನಸು 
ಹೇಳುತಿತ್ತು ....
ಇವಳೇ ...
ಇವಳೇ ...
ನಿನ್ನ ಮುರಿದ
ಮನಸಿಗೆ
ಕನಸಿಗೆ
ತೇಪೆ ಹಚ್ಚುವವಳು ....

'ಹೃದಯದ ತುಂಟಾಟ'ವೆಂದರೆ.....

ಹೌದು ... 
'ಹೃದಯದ ತುಂಟಾಟ'ವೆಂದರೆ..... 
ತನ್ನಲ್ಲಿ ಗೌಪ್ಯವಾಗಿಟ್ಟ 
ಇನ್ನೆಂದೂ 
ಓದಬಾರದೆಂದು
ಬಯಸಿ ಮುಚ್ಚಿಟ್ಟ
ಪ್ರೇಮ ಕಾವ್ಯದ
ಸಿಹಿ-ಕಹಿಗಳ
ಗೀಚಿಟ್ಟ ಹಳೆಯ
ಪುಸ್ತಕವ ಹೊರಗೆಳೆದು
ತೆರೆದು
ಮರೆಯಲು ಬಯಸಿದ್ದ
ವ್ಯಥೆಯ ಸಾಲುಗಳನ್ನು
ಜೋರಾಗಿ ಓದಿ
ಕಿಲಕಿಲನೆ
ನಕ್ಕು
ಪರಿಹಾಸ ಮಾಡುವುದು ...

ಹೆಂಡದ ಮುಗ್ಗುನಾತ

ನಲ್ಲಾ ... 
ನೀ ಮುದ್ದುಗೈವಾಗ 
ನನ್ನ ಮೂಗಿಗೊತ್ತಿ 
ಮುದ್ದಿಸು .. 
ತಾಳಲಾರೆ ... 

ಸಹಿಸಲಾರೆ
ಖುಷಿಯನ್ನಲ್ಲ .....
ನಿನ್ನ
ಹೆಂಡದ
ಮುಗ್ಗು ನಾತವನ್ನು .

(ಮುಗ್ಗುನಾತ =ಕೆಟ್ಟ /ಕೊಳೆತ ವಾಸನೆ )

ಅಮ್ಮನಿರಲಿಲ್ಲ ...

ನಿವೃತ್ತಿ ವೇತನ ಪಡೆದು 
ಮರಳುತಿದ್ದ 
ಅಪ್ಪನಿಗಾಗಿ 
ದಾರಿ ಕಾಯುವ 
ಅಮ್ಮ-ಮಕ್ಕಳು ...... 
ಸಿಹಿ ತುಂಬಿದ
ಪೊಟ್ಟಣವ
ಅಮ್ಮನ ಕೈಗಿತ್ತು
ಪೋಗುತಿದ್ದ
ಅಪ್ಪನ ನಗುಮುಖ ...
ಮಕ್ಕಳಿಗೆ ಸಮನಾಗಿ
ಹಂಚುವ ಅಮ್ಮನ
ಕರ್ತವ್ಯದ ಕರಗಳು ..

ಆ ದಿನಗಳನು
ನೆನಪಿಸಿತು
'ಈ ದಿನ'
ಕಯ್ಯಲಿರುವ
ಪೊಟ್ಟಣ ವ
ಯಾರ ಕೈಗಿಡಬೇಕೆಂಬ
ಅಪ್ಪನ ಮನಸಿನ
ಗೊಂದಲ ....
ನಗುವಿಂದ
ಸ್ವೀಕರಿಸಲು
ಅಮ್ಮನಿರಲಿಲ್ಲ ...

(ಇದು ಅನುಭವ) 

'ಇಷ್ಟವಿಲ್ಲ' ಎಂದಿದ್ದರೆ ...........

ಪ್ರೀತಿಯನ್ನು ನಟಿಸಿ 
ಮೊಸಗೊಳಿಸುವ ಬದಲು 
ಅಂದೇ 
'ಇಷ್ಟವಿಲ್ಲ' ಎಂದಿದ್ದರೆ 
ನಾ 
ಇಂದಿನಂತಾಗುತಿರಲಿಲ್ಲ..
ಒಂದೆರಡು ದಿನ
ಕೊರಗಿ
ಆಮೇಲೆ
ಸರಿಯಾಗುತಿದ್ದೆ(ನೇನೋ ... )

ಬಾ ಕೋಗಿಲೇ ..

ಹೃದಯದಲಿ 
ಪ್ರೇಮ ಚಿಗುರಿದೆ .. 
ಮಾಮರವೆಂದು 
ನೆನೆದು 
ನೀ ಬಂದು 

ಹಾಡನು
ಹಾಡಿದೊಡೆ
ಪುಳಕದಲಿ
ಇನ್ನೂ
ಹಸಿರಾಗಬಹುದೆನ್ನ
ಮನಸು-ಹೃದಯ ..
ಹಾಡು
ಬಾ ಕೋಗಿಲೇ .. 

ವ್ಯತ್ಯಾಸ



ಅವಳು ಬರೆದಿದ್ದಳು 
ಇಲ್ಲಿ ... 
ಮುಖಪುಟದಲ್ಲಿ 
ಉಷಾರಿಲ್ಲ ..
ಶೀತ , ಜ್ವರ ...

ಕಾಮೆಂಟುಗಳ ಸುರಿಮಳೆ ..
ವೈದ್ಯರ ಬಳಿ ಹೋಗಿಲ್ಲವೇ ..
ಮಾತ್ರೆ ನುಂಗಿದಿರಾ
ಕಷಾಯ ಕುಡಿದ್ರಾ ..

ಅವನೂ ಬರೆದಿದ್ದ ...
ಆಸ್ಪತ್ರೆಯಲ್ಲಿರುವೆ
ಕಾಲು ಮುರಿದಿದೆ ...
ವಾರಗಳೇ ಬೇಕೆನೆಗೆ
ಸುಧಾರಿಸಲು ..

ಹೇಳೋರೂ
ಇಲ್ಲ
ಕೇಳೋರಂತೂ
ಇಲ್ಲವೇ
ಇಲ್ಲ..

ಎರಡು ದಿನಗಳ ನಂತರ
ನೋಡಿದಾಗ
ಎರಡು ಲೈಕು ಗಳು
ಒಂದು ಕಾಮೆಂಟು ...
'ಇನ್ನೂ ನಿನ್ ಕಾಲು
ಸರಿಯಾಗಿಲ್ವಾ .... '

(facebook ನಲ್ಲಿ ಕಂಡ ಒಂದು ವ್ಯಂಗ್ಯ ಮಾತಿನ/photo ದಿಂದ ಪ್ರೇರಿತ )

Thursday, 7 November 2013

ನೀನೊಂದು ವನಸುಮ .

ಪ್ರಿಯೇ ..
ನನಗರಿವಿದೆ .. 
ನೀನೊಂದು ವನಸುಮ .. 
ನನ್ನ ಮರೆತು ಯಾ 
ಮರೆತಂತೆ ನಟಿಸಿ 
ಕಾನನದಲ್ಲಿ 
ನಗುತಿದ್ದರೂ
ಅಳುತಿದ್ದರೂ 
ನಾ ಕಾಣುವೆನು 
ನಿನ್ನ ನಗುವನು 
ನಿನ್ನ ಅಳುವನು ... 
ನೀನು 
ಭುವನಮೊಹನಿ ಯಾದರೆ 
ನಾನು...  
ಭುವನನಯನ
ಎಲ್ಲಿದ್ದರೂ ನಿನ್ನ 
ಇರುವು ಕಾಣುವೆನು ..  . 

(ಭುವನಮೊಹನಿ=ಜಗತ್ತನ್ನೇ ಮೋಹಗೊಳಿಸುವವಳು 
 ಭುವನನಯನ = ಸೂರ್ಯ )

Wednesday, 6 November 2013

ಕವನ ಬರೆಯಲು ಬಲು ಸುಲಭ ..

ಕವನ ಬರೆಯಲು ಬಲು ಸುಲಭ .. 
ಮೊದಲು ನೀ ನೆಡು 
ವಿಷಯವೆಂಬ ಗಿಡ
ವಿರಹದ ಗೊಬ್ಬರವ ಹಾಕು 
ಉಪ್ಪಿನ ಕಣ್ಣೀರ ಥಳಿಸು ..
ಗಿಡ ಬೆಳೆವುದ ನೋಡಿ ನಗು ... 
ನಂತರ ನೀ ಪೋಗು ಭ್ರಮೆಯೆಂಬ 
ಲೋಕಕೆ .. 
ಅದರಲರಳುವ ಹೂವ ನೆನೆಸು 
ಅರಳಿದ ಹೂವ ಮೂಸಿ 
ಪರಿಮಳವ , ಸುಗಂಧವ
ಅನುಭವಿಸು ..
ಕೊನೆಗೆ ಆ ಹೂವು
ಬಾಡಿದಂತೆ ಗ್ರಹಿಸು ...
ಇನ್ನು ನೀ ತೆಗೆ
ಲೇಖನಿಯ ...
ಗೀಚುತ ಹೋಗು
ನಿನ್ನ ಗ್ರಹಿಕೆಯ ...
ಕೊನೆಗೆ
ಕಾಣುವುದು ನೀ ನೆಟ್ಟ
ಗಿಡದಲಿ
ಶ್ರೀಮಂತ ಫಸಲು ..

ಕೆಲವೊಂದು ಕವನಗಳು ....

ಕೆಲವೊಂದು 
ಕವನಗಳು 
ವೈದ್ಯ ಕೊಟ್ಟ 
ಚೀಟಿಯಂತೆ.. 
ಓದಲು ಬರುವುದು 
ಬರೀ ಔಷಧಿ 
ಅಂಗಡಿಯಾತನಿಗೆ
ನಮ್ಮ- ನಿಮ್ಮಂತಹ 
ರೋಗಿಗಳಿಗಲ್ಲ ..  

Tuesday, 5 November 2013

'ಕವನ' ಗಳು ..

ಹೌದು ... 
ನನಗನಿಸುತ್ತದೆ
ನೋವುಗಳಿಲ್ಲದಿದ್ದಲ್ಲಿ 
ಹುಟ್ಟುತಿರಲಿಲ್ಲವೇನೋ ... 
'ಕವನ' ಗಳು ..

ನನ್ನ ಕವನಗಳೆಂದರೆ ..........

(ನನ್ನ)
ಕವನಗಳೆಂದರೆ
ವಿರಹದಲಿ 
ಅರಳುವ 
ಸುಮಗಳು

'ಕಣ್ಣೀರು'

ಕಡಲ ನೀರ ರುಚಿ 
ಉಪ್ಪಾಗಿರಲು ...... 
ಪ್ರೀತಿಸುವ ಹೃದಯಗಳ 
ಅಗಲಿಕೆಯ ನೋವಿನಲಿ 
ಆತ್ತ- ಅಳುತಿರುವ 
ಜಲಜೀವಿಗಳ 
'ಕಣ್ಣೀರು' 
ಕಾರಣವಿರಬಹುದೇ ... ???

ನಿನ್ನ ನೆನಪುಗಳು ......

ಹೌದು ಪ್ರಿಯೇ ...
ನಿನ್ನ ನೆನಪುಗಳು
ತುರಿಕೆಯ
ಹುಣ್ಣಿ(ಕಜ್ಜೆ)ನಂತೆ..
ತುರಿಸಲು (ನೆನೆಯಲು)
ಪಡುವೆನು ಸುಖ ..
ಒಳಗಡೆ(ಹೃದಯದಲಿ)
ಕೀವು ಬಂದು
ನೊವನನುಭವಿಸುವ
ನಿಮಿಷದಲೂ ......

Monday, 4 November 2013

ಅಮ್ಮಾ .............


ಅಮ್ಮಾ 
ನಿನ್ನ ಅಕ್ಕರೆಯ 
ನೆನೆಯಲು 
ಹೃದಯದಲಾಗುವುದು 
ಋತು ಬದಲಾವಣೆ... 
ಮನದಲ್ಲಿ 
ಮೋಡ ಕವಿವುದು 
ಎದೆಯೊಳಗೆ 
ಗುಡುಗು ಸಿಡಿಲು ... 
ಹನಿ ಹನಿಯಾಗಿ
ಮಳೆಯ ಸುರಿಸಲು
ಸಜ್ಜಾಗುವುದು 
ಎರಡು 
ನೇತ್ರಗಳು ... 


ಗದ್ಯ - ಪದ್ಯ

ಉದರ ಸೇರಿದರೆ 
ಮದ್ಯ 
ಗದ್ಯವಾಗುವುದು 
ಪದ್ಯ 

(ಕೆಲವರಿಗೆ ಮಾತ್ರ )

ನಿನ್ನ ನೆನಪುಗಳು

ಪ್ರಿಯೇ 
ನಾವಂದು 
ಓಡಾಡುತಿದ್ದ 
ದಾರಿಯಲಿಂದು ನಡೆದಿದ್ದೆ 
ನಾನೊಬ್ಬನೇ 

ಬರಿಗಾಲಲಿ ನಡೆವಾಗ
ನಮ್ಮನ್ನು ಚುಚ್ಹುತಲಿದ್ದ
ನಮ್ಮ ಶತ್ರುಗಳು
ಆ ಕಲ್ಲು ಮುಳ್ಳುಗಳು
ಕಾಣಿಸಲೇ ಇಲ್ಲ

ಕಪ್ಪು ಕಂಬಳಿಯ ಹೊದ್ದು
ಹೊಸ ರೂಪದೊಂದಿಗೆ
ರಸ್ತೆಯೆಂಬ ನಾಮ ಪಡೆದು
ನಗುತ ಮಲಗಿತ್ತು
ಚಿಂತೆಗಳಿಲ್ಲದೆ

ಪರಿಚಯದ ಮಾವು
ಹಲಸು , ತೆಂಗು , ಕಂಗು
ಮರಗಳೆಲ್ಲ
ಮುಗುಳ್ನಗೆ ಬೀರಿದುವು
ದಾರಿಯುದ್ದಕ್ಕೂ

ಕಲ್ಲು ಮುಳ್ಳುಗಳಿಲ್ಲದಿದ್ದರೇನಂತೆ
ದಾರಿಯುದ್ದಕ್ಕೂ ಚುಚ್ಹುತಲಿತ್ತು
ನನ್ನ ಹೃದಯವನು
ನಿನ್ನ ನೆನಪುಗಳು